ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿ ಮಾಡಿ ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖವಾದ 18 ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ದಶಕಗಳಿಂದ ಬಾಕಿ ಇರುವ ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳ ಕುರಿತು ಪ್ರಧಾನಿಯವರ ಗಮನ ಸೆಳೆದರು.
ಮನವಿಯಲ್ಲಿರುವ 18 ಪ್ರಮುಖ ಬೇಡಿಕೆಗಳು ಇಲ್ಲಿವೆ:
ಬೆಂಗಳೂರಿಗೆ ವಿಶೇಷ ಅನುದಾನ: ಐಟಿ ಹಬ್ ಬೆಂಗಳೂರಿನ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 6,000 ಕೋಟಿ ರೂ.ಗಳ ವಿಶೇಷ ಅನುದಾನ.
ಬಾಕಿ ಅನುದಾನ ಬಿಡುಗಡೆ: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಒಟ್ಟು 75,000 ಕೋಟಿ ರೂ. ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವುದು.
ಮೇಕೆದಾಟು ಯೋಜನೆ: ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಸಮತೋಲನಾ ಜಲಾಶಯ ಯೋಜನೆಗೆ ಅಂತಿಮ ಅನುಮೋದನೆ.
ಮಹದಾಯಿ ಯೋಜನೆ: ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ತಕ್ಷಣದ ಅನುಮತಿ.
ರಾಯಚೂರು ಏಮ್ಸ್ (AIIMS): ಉತ್ತರ ಕರ್ನಾಟಕದ ಆರೋಗ್ಯ ಸುಧಾರಣೆಗೆ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಮಂಜೂರಾತಿ.
ಮೀಸಲಾತಿ ರಕ್ಷಣೆ: ರಾಜ್ಯದ ಶೇ. 56ರಷ್ಟು ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವುದು.
ಉಪನಗರ ರೈಲು ಯೋಜನೆ: ಬೆಂಗಳೂರು ಉಪನಗರ ರೈಲು (Suburban Rail) ಯೋಜನೆಗೆ ಕೇಂದ್ರದ ಪಾಲಿನ ಅನುದಾನ ಬಿಡುಗಡೆ.
ಕೃಷ್ಣಾ ಮೇಲ್ದಂಡೆ ಯೋಜನೆ: ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಗೆಜೆಟ್ ಅಧಿಸೂಚನೆ ಹೊರಡಿಸುವುದು ಮತ್ತು ಯೋಜನೆಗೆ ರಾಷ್ಟ್ರೀಯ ಮಾನ್ಯತೆ.
ಕೋಲಾರ ರೈಲ್ವೆ ಕಾರ್ಖಾನೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೋಲಾರ ರೈಲ್ವೆ ಕೋಚ್ ಕಾರ್ಖಾನೆ ಪುನರಾರಂಭ.
ಹೈಸ್ಪೀಡ್ ರೈಲು ಕಾರಿಡಾರ್: ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಮುಂಬೈ ಮಾರ್ಗಗಳನ್ನು ಹೈಸ್ಪೀಡ್ ರೈಲು ಕಾರಿಡಾರ್ ವ್ಯಾಪ್ತಿಗೆ ಸೇರಿಸುವುದು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ: 371(J) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕ 5,000 ಕೋಟಿ ರೂ. ವಿಶೇಷ ಪ್ಯಾಕೇಜ್.
ಜಲಜೀವನ್ ಮಿಷನ್: ಈ ಯೋಜನೆಯಡಿ ರಾಜ್ಯ ಸರ್ಕಾರಕ್ಕೆ ಬರಬೇಕಾದ 17,554 ಕೋಟಿ ರೂ. ಬಾಕಿ ಹಣದ ಬಿಡುಗಡೆ.
ಗ್ರಾಮ ಪಂಚಾಯತ್ ಅನುದಾನ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪಂಚಾಯತ್ಗಳಿಗೆ ಬರಬೇಕಾದ 2,860 ಕೋಟಿ ರೂ. ಅನುದಾನ.
ನಮ್ಮ ಮೆಟ್ರೋ ವಿಸ್ತರಣೆ: ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಶೀಘ್ರ ಒಪ್ಪಿಗೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳು: ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹೆಚ್ಚಿನ ಅನುದಾನ.
ಬರ ಪರಿಹಾರ: ರಾಜ್ಯದ ರೈತರಿಗೆ ನೆರವಾಗಲು ಬಾಕಿ ಇರುವ ಎನ್.ಡಿ.ಆರ್.ಎಫ್ (NDRF) ಅನುದಾನ ಬಿಡುಗಡೆ.
ಕೈಗಾರಿಕಾ ಕಾರಿಡಾರ್: ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಕಾಮಗಾರಿಗೆ ವೇಗ ನೀಡುವುದು.
ಜಿಎಸ್ ಟಿ ಬಾಕಿ: ಜಿಎಸ್ ಟಿ ಪರಿಹಾರದ ಮೊತ್ತ ಮತ್ತು ರಾಜ್ಯದ ತೆರಿಗೆ ಪಾಲಿನ ಮರುಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು.
“ಕರ್ನಾಟಕವು ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಕೇಂದ್ರದಿಂದ ಬರಬೇಕಾದ ಅನುದಾನ ವಿಳಂಬವಾಗುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಪ್ರಧಾನಿಯವರು ಈ ಎಲ್ಲ 18 ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು,” ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ಒತ್ತಾಯಿಸಿದ್ದಾರೆ.

