ಕೊಡಗು: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇಂದು ನಡುಕ ಹುಟ್ಟಿಸುವ ಘಟನೆಯೊಂದು ನಡೆದಿದೆ. ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಎರಡು ಸಾಕಾನೆಗಳ ನಡುವೆ ದಿಢೀರ್ ಜಗಳ ಶುರುವಾಗಿದ್ದು, ಈ ವೇಳೆ ಅವುಗಳ ಮಧ್ಯೆ ಸಿಲುಕಿದ ಪ್ರವಾಸಿ ಮಹಿಳೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ.
ಚೆನ್ನೈ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಜೋಯಲ್ ಅವರ ಪತ್ನಿ ಜಿನ್ಶು (33) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಪತಿ ಜೋಯಲ್ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನದಿಯಲ್ಲೇ ನಡೆದ ಹೈಡ್ರಾಮಾ: ಏನಿದು ಘಟನೆ?
ಪ್ರವಾಸಕ್ಕೆ ಬಂದಿದ್ದ ಕುಟುಂಬ: ಚೆನ್ನೈನಿಂದ ಪತಿ ಮತ್ತು ಮಗುವಿನೊಂದಿಗೆ ಜಿನ್ಶು ಅವರು ಕೊಡಗು ಪ್ರವಾಸಕ್ಕೆ ಬಂದಿದ್ದರು. ಎಂದಿನಂತೆ ದುಬಾರೆ ಶಿಬಿರದಲ್ಲಿ ಆನೆಗಳ ಆಟ ನೋಡಲು ಕಾವೇರಿ ನದಿ ದಂಡೆಗೆ ತೆರಳಿದ್ದರು.
ಆನೆಗಳ ದಿಢೀರ್ ಫೈಟ್: ಮಾವುತರು ‘ಕಂಜನ್’ ಮತ್ತು ‘ಮಾರ್ತಾಂಡ’ ಎಂಬ ಎರಡು ಸಾಕಾನೆಗಳನ್ನು ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ದಸರಾ ಆನೆಯಾದ ‘ಕಂಜನ್’ ಏಕಾಏಕಿ ಕೋಪಗೊಂಡು ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿದೆ.
ನಿಯಂತ್ರಣ ತಪ್ಪಿದ ಆನೆ: ಎರಡು ಬೃಹತ್ ಆನೆಗಳ ಕಾಳಗದಿಂದ ಹೆದರಿದ ಪ್ರವಾಸಿಗರು ಓಡಲಾರಂಭಿಸಿದ್ದಾರೆ. ಈ ಗೊಂದಲದಲ್ಲಿ ಜಿನ್ಶು ನದಿಯ ನೀರಿನಲ್ಲಿ ಬಿದ್ದಿದ್ದಾರೆ. ತಕ್ಷಣವೇ ಕಂಜನ್ ಆನೆ ತಳ್ಳಿದ ರಭಸಕ್ಕೆ ಮಾರ್ತಾಂಡ ಆನೆಯು ಜಿನ್ಶು ಅವರ ಮೈಮೇಲೆಯೇ ಬಿದ್ದಿದೆ.
ಸ್ಥಳದಲ್ಲೇ ಸಾವು: ಬೃಹತ್ ಆನೆಯ ಭಾರಕ್ಕೆ ಸಿಲುಕಿ ಜಿನ್ಶು ತೀವ್ರವಾಗಿ ಜಜ್ಜಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕುಶಾಲನಗರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅರಣ್ಯ ಸಚಿವರ ಗರಂ: ಕಠಿಣ ನಿಯಮ ಜಾರಿ!
ಈ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ:
ಪ್ರವಾಸಿಗರು ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಸೆಲ್ಫಿ ತಗೆದುಕೊಳ್ಳುವುದನ್ನು ತಕ್ಷಣದಿಂದಲೇ ಸಂಪೂರ್ಣ ನಿಷೇಧಿಸಬೇಕು.
ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಆಹಾರ ನೀಡುವುದಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಬಾರದು.
ವನ್ಯಜೀವಿಗಳಿಂದ ಪ್ರವಾಸಿಗರು ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
ಸದ್ಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರವಾಸಿ ತಾಣದಲ್ಲಿನ ಭದ್ರತಾ ಲೋಪದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

