Fri. Jun 12th, 2026

ಮಗುವಿನ ಸಾವು ತನಿಖೆಯಲ್ಲಿ ನಿರ್ಲಕ್ಷ್ಯ: ಇನ್ಸ್‌ಪೆಕ್ಟರ್ ಸೇರಿ ಕಾಡುಗೋಡಿ ಠಾಣೆಯ 3 ಸಿಬ್ಬಂದಿ ಅಮಾನತು

Share this with Friends

ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಗುವಿನ ಸಾವಿನ ಪ್ರಕರಣದ ತನಿಖೆಯಲ್ಲಿ ತೀವ್ರ ಬೇಜವಾಬ್ದಾರಿತನ ಹಾಗೂ ನಿಯಮ ಉಲ್ಲಂಘನೆ ಪ್ರದರ್ಶಿಸಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, ಕರ್ತವ್ಯ ಲೋಪ ಹಾಗೂ ಕಾನೂನು ಬಾಹಿರ ನಡವಳಿಕೆಗಳನ್ನು ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ಮುಚ್ಚಿಡಲು ಯತ್ನಿಸಿದ್ದ ಅಧಿಕಾರಿಗಳು:

ಕಳೆದ ಏಪ್ರಿಲ್ 4 ರಂದೇ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ವರದಿಯಲ್ಲಿ ಮಗುವಿನದ್ದು ಕೊಲೆ ಎಂದು ದೃಢಪಟ್ಟ ತಕ್ಷಣವೇ ಅಧಿಕಾರಿಗಳು ಅದನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಎಫ್‌ಐಆರ್ (FIR) ದಾಖಲಿಸಬೇಕಿತ್ತು. ಆದರೆ, ನಿಯಮಗಳಿಗೆ ವಿರುದ್ಧವಾಗಿ ಪ್ರಕರಣವನ್ನು ಕೇವಲ ಅಸ್ವಾಭಾವಿಕ ಸಾವು ವರದಿ (UDR) ವ್ಯಾಪ್ತಿಯಲ್ಲೇ ಇಟ್ಟುಕೊಂಡು ವಿಳಂಬ ನೀತಿ ಅನುಸರಿಸಿದ್ದಾರೆ. ಇದು ಅತ್ಯಂತ ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಂದು ಸಚಿವರು ವಿವರಿಸಿದ್ದಾರೆ.

ಮೂವರ ವಿರುದ್ಧ ಕಠಿಣ ಕ್ರಮ:

ತನಿಖೆಯಲ್ಲಿ ಉದಾಸೀನತೆ ತೋರಿದ ಹಿನ್ನೆಲೆಯಲ್ಲಿ ಕಾಡುಗೋಡಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ರೈಟರ್ ಸೇರಿದಂತೆ ಒಟ್ಟು 3 ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕ ಎಂಬುವವರನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. ಸಂಪೂರ್ಣ ವರದಿ ಕೈಸೇರಿದ ನಂತರ ತಪ್ಪಿತಸ್ಥರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?:

ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಮಗುವೊಂದು ನಿಗೂಢವಾಗಿ ಮೃತಪಟ್ಟಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮೋಹನ್ ಮತ್ತು ಪ್ರಿಯಾಂಕ ಎಂಬುವವರ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿತ್ತು. ಮಗುವಿನ ಸಾವಿನ ಹಿಂದೆ ಈ ಇಬ್ಬರ ಕೈವಾಡವಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಇವರನ್ನು ಪ್ರಮುಖ ಆರೋಪಿಗಳೆಂದು ಗುರುತಿಸಿ, ಈಗಾಗಲೇ ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

 


Share this with Friends

Related Post