Tue. Jun 23rd, 2026

ಬಿಡದಿ ಟೌನ್‌ಶಿಪ್ ಕದನ: ಸಭೆಯ ಸ್ಥಳ ಮತ್ತು ದಿನಾಂಕ ಬದಲಾವಣೆಗೆ ಹೆಚ್‌ಡಿಕೆ ಮರು ಪತ್ರ

Share this with Friends

ಬೆಂಗಳೂರು: ಬಿಡದಿ ನೂತನ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಾಕ್ಸಮರ ಈಗ ಪತ್ರ ಸಮರದ ರೂಪ ಪಡೆದುಕೊಂಡಿದೆ. ಮುಖಾಮುಖಿ ಚರ್ಚೆಗೆ ಆಹ್ವಾನಿಸಿ ಬಂದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಸಭೆಯ ಸ್ಥಳ ಮತ್ತು ದಿನಾಂಕವನ್ನು ಬದಲಾಯಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಮರು ಪತ್ರ ಬರೆದಿದ್ದಾರೆ.

ಆಹ್ವಾನ ಪತ್ರದಲ್ಲೇನಿದೆ?

ಬಿಡದಿ ಟೌನ್‌ಶಿಪ್ ಯೋಜನೆ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ಜೂನ್ 26ರಂದು ಬೆಳಿಗ್ಗೆ 11:00 ಗಂಟೆಗೆ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ಬರುವಂತೆ ಅಧಿಕೃತ ಆಹ್ವಾನ ನೀಡಲಾಗಿತ್ತು. “ನಿಮ್ಮ ತಂಡದ ಐದು ಮಂದಿ ಪ್ರತಿನಿಧಿಗಳೊಂದಿಗೆ ಮಾತುಕತೆಗೆ ಬನ್ನಿ” ಎಂದು ಆಹ್ವಾನ ಪತ್ರದಲ್ಲಿ ತಿಳಿಸಲಾಗಿತ್ತು.

ಕುಮಾರಸ್ವಾಮಿ ಅವರ ಮರು ಸವಾಲು:

ಈ ಆಹ್ವಾನಕ್ಕೆ ಪತ್ರದ ಮೂಲಕವೇ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ವಿಧಾನಸೌಧದ ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವ ಬದಲು, ಜಮೀನು ಕಳೆದುಕೊಳ್ಳುತ್ತಿರುವ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲೇ ಬಹಿರಂಗ ಚರ್ಚೆ ಆಯೋಜಿಸುವುದು ನ್ಯಾಯೋಚಿತ ಎಂದು ಪ್ರತಿಪಾದಿಸಿದ್ದಾರೆ. ಇದು ಸಾವಿರಾರು ರೈತರ ಬದುಕಿನ ಪ್ರಶ್ನೆಯಾಗಿದ್ದು, ನೊಂದ ಅನ್ನದಾತರ ಸಮ್ಮುಖದಲ್ಲೇ ಸಭೆ ನಡೆಯಬೇಕು ಎಂದು ಅವರು ಹೇಳಿದ್ದಾರೆ.

ಜೂನ್ 26ರಂದು ತಮಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿರುವ ಕುಮಾರಸ್ವಾಮಿ, ಬದಲಾಗಿ ಜೂನ್ 27ರಂದು ಬೈರಮಂಗಲದಲ್ಲಿ ಸಭೆ ಆಯೋಜಿಸಿದರೆ ತಾವು ಯಾವುದೇ ಸಮಯಕ್ಕಾದರೂ ಬರಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಸೂಕ್ತ ಸಮಯ ನಿಗದಿಪಡಿಸಲಿದ್ದಾರೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ವಿವಾದದ ಹಿನ್ನೆಲೆ:

ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ‘ನೂತನ ಸ್ಮಾರ್ಟ್ ಟೌನ್‌ಶಿಪ್’ ನಿರ್ಮಿಸಲು ಸರ್ಕಾರ ಯೋಜಿಸಿದೆ. ಆದರೆ, ತಲತಲಾಂತರದಿಂದ ಕೃಷಿ ನಂಬಿ ಬದುಕುತ್ತಿರುವ ಸ್ಥಳೀಯ ರೈತರು ಈ ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಬೈರಮಂಗಲ ಭಾಗದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆರಂಭದಿಂದಲೂ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಈ ಯೋಜನೆ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲೇ ಪ್ರಸ್ತಾಪವಾಗಿತ್ತು ಎಂದು ಆಡಳಿತ ಪಕ್ಷದ ನಾಯಕರು ವಾದಿಸುತ್ತಿದ್ದರೆ, ಇದು ರೈತರ ವಿರೋಧಿ ಯೋಜನೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಭೆಯ ಆಹ್ವಾನ ತೀವ್ರ ಕುತೂಹಲ ಮೂಡಿಸಿದೆ.

 

 


Share this with Friends

Related Post