Wed. Jul 8th, 2026

ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆ: ರಾಜ್ಯದ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಲೋಕಾಯುಕ್ತ ಸರಣಿ ದಾಳಿ!

Karnataka Lokayukta
Share this with Friends

ಬೆಂಗಳೂರು:ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕದ ಒಟ್ಟು 10 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ವಿಭಾಗ ಭರ್ಜರಿ ಬಿಸಿ ಮುಟ್ಟಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 30 ಕ್ಕೂ ಅಧಿಕ ಪ್ರಮುಖ ನೆಲೆಗಳ ಮೇಲೆ ಅಧಿಕಾರಿಗಳ ವಿಶೇಷ ತಂಡ ಏಕಕಾಲದಲ್ಲಿ ದಾಳಿ ನಡೆಸಿ, ಆಸ್ತಿಪಾಸ್ತಿಗಳ ತಪಾಸಣೆ ಕೈಗೊಂಡಿದೆ.

ಅರಣ್ಯ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ನಡುಕ:

ಕಲ್ಬುರ್ಗಿಯ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮೃತರಾವ್ ಯಲಾಲ್ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ಏಳು ಕಡೆಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇವರ ಐಷಾರಾಮಿ ಫ್ಲ್ಯಾಟ್, ತೋಟದ ಮನೆ ಹಾಗೂ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದರೊಂದಿಗೆ ಶಿವಮೊಗ್ಗದ ಅರಣ್ಯ ಸಂರಕ್ಷಣಾ ಇಲಾಖೆಯ (ACF) ಅಧಿಕಾರಿ ಕಿರಣ್ ಅಂಗಡಿ ಅವರ ಐದು ಪ್ರಮುಖ ಸ್ಥಳಗಳ ಮೇಲೆಯೂ ತನಿಖಾ ತಂಡಗಳು ದಾಳಿ ನಡೆಸಿವೆ.

ರಾಯಚೂರಿನಲ್ಲಿ ಇಂಜಿನಿಯರ್ ಆಸ್ತಿಗಳ ಮೇಲೆ ತಪಾಸಣೆ:

ಇತ್ತ ರಾಯಚೂರಿನ ಕೃಷ್ಣ ಭಾಗ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್ ಅವರಿಗೆ ಸೇರಿದ ಏಳು ಆಸ್ತಿಗಳ ಮೇಲೆ ದಾಳಿಯಾಗಿದೆ. ಇವರ ಮಾಲೀಕತ್ವದ ಪೆಟ್ರೋಲ್ ಬಂಕ್, ಬಾರ್ ಹಾಗೂ ನಿವಾಸಗಳಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ತುಮಕೂರು, ಚಿತ್ರದುರ್ಗ ಹಾಗೂ ರಾಜಧಾನಿ ಬೆಂಗಳೂರಿನಲ್ಲಿಯೂ ಇಂಜಿನಿಯರ್‌ಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಮನೆಗಳ ಮೇಲೆ ದಾಳಿ ಮುಂದುವರಿದಿದೆ.

ಪ್ರಸ್ತುತ ತನಿಖಾ ತಂಡಗಳು ಅಧಿಕಾರಿಗಳ ಬ್ಯಾಂಕ್ ಖಾತೆ, ನಗದು ಹಣ, ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳನ್ನು ಪರಿಶೀಲಿಸುತ್ತಿದ್ದು, ಸದ್ಯದಲ್ಲೇ ವಶಪಡಿಸಿಕೊಂಡ ಒಟ್ಟು ಅಕ್ರಮ ಆಸ್ತಿಯ ಸಂಪೂರ್ಣ ಅಧಿಕೃತ ವಿವರ ಹೊರಬೀಳಲಿದೆ.

 

 


Share this with Friends

Related Post