ರಾಮನಗರ: ಬಹುಕೋಟಿ ವೆಚ್ಚದ ಬಿಡದಿ ಸ್ಮಾರ್ಟ್ ಟೌನ್ಶಿಪ್ ಯೋಜನೆಗಾಗಿ ರೈತರ ಜಮೀನನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಡದಿಯಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಅವರು, ಸ್ಥಳದಲ್ಲೇ ಸರ್ಕಾರಕ್ಕೆ ವಿಶೇಷ ಪತ್ರ ಬರೆಯುವ ಮೂಲಕ ರೈತರ ಧ್ವನಿಗೆ ಸಾಥ್ ನೀಡಿದ್ದಾರೆ.
ಪ್ರಗತಿಯ ಹೆಸರಲ್ಲಿ ರೈತರ ಹಕ್ಕು ಹತ್ತಿಕ್ಕಬೇಡಿ
ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಆಕ್ರೋಶ ಹೊರಹಾಕುತ್ತಿರುವ ಅನ್ನದಾತರ ಮನವಿ ಆಲಿಸಿದ ಜಸ್ಟಿಸ್ ಸಂತೋಷ್ ಹೆಗ್ಡೆ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಮೂಲಭೂತ ಹಕ್ಕುಗಳನ್ನು ಮತ್ತು ಅವರ ಜೀವನೋಪಾಯವನ್ನು ಕಸಿದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸ್ಥಳೀಯ ಭೂಮಾಲೀಕರ ಮುಕ್ತ ಅಭಿಪ್ರಾಯ ಮತ್ತು ಒಪ್ಪಿಗೆಯನ್ನು ಪಡೆಯುವುದು ಅತ್ಯಗತ್ಯ. ಅದನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಬಾರದು ಎಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾ ಕಣದಲ್ಲೇ ಪತ್ರ ಚಳುವಳಿ
ಕಳೆದ ಕೆಲವು ದಿನಗಳಿಂದ ಬಿಡದಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ರೈತರು ಟೌನ್ಶಿಪ್ ಯೋಜನೆ ವಿರುದ್ಧ ಸರಣಿ ಧರಣಿ ನಡೆಸುತ್ತಿದ್ದಾರೆ. ಇಂದು ಪ್ರತಿಭಟನಾ ನಿರತರನ್ನು ಭೇಟಿಯಾದ ಸಂತೋಷ್ ಹೆಗ್ಡೆ ಅವರು, ಸ್ಥಳದಲ್ಲೇ ಆಡಳಿತಾರೂಢ ಸರ್ಕಾರಕ್ಕೆ ಮನವಿ ಪತ್ರ ಸಿದ್ಧಪಡಿಸಿ ರವಾನಿಸುವ ಮೂಲಕ ರೈತ ಹೋರಾಟಕ್ಕೆ ಮತ್ತಷ್ಟು ಕಾನೂನಾತ್ಮಕ ಹಾಗೂ ನೈತಿಕ ಬಲ ತುಂಬಿದ್ದಾರೆ.

