ಬೆಂಗಳೂರು: ಸಿಲಿಕಾನ್ ಸಿಟಿಯ ಬಿಡುವಿನ ವೇಳೆಯಲ್ಲೇ (Peak Hours) ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ತಾಂತ್ರಿಕ ದೋಷವೊಂದು ಭಾರಿ ತೊಂದರೆ ತಂದೊಡ್ಡಿದೆ. ಇಂದು ಮುಂಜಾನೆ ಹಸಿರು ಮಾರ್ಗದ ರೈಲು ಸಂಚಾರದಲ್ಲಿ ಹಠಾತ್ ತಾಂತ್ರಿಕ ಅಡಚಣೆ ಉಂಟಾಗಿದ್ದು, ಮಾದಾವರ ಮತ್ತು ತಲಘಟ್ಟಪುರ ನಡುವಿನ ಸಂಚಾರ ಸಂಪೂರ್ಣ ವಿಳಂಬಗೊಂಡಿದೆ.
ಮುಂಜಾನೆಯೇ ಶುರುವಾದ ಟೆನ್ಷನ್
ಗುರುವಾರ ಬೆಳಗ್ಗೆ ಸುಮಾರು 8:50ರ ಅವಧಿಯಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಚೇರಿ ಹಾಗೂ ಕಾಲೇಜುಗಳಿಗೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ್ದ ಲಕ್ಷಾಂತರ ಸಾರ್ವಜನಿಕರು ಮೆಟ್ರೋ ವಿಳಂಬದಿಂದಾಗಿ ನಿಲ್ದಾಣಗಳಲ್ಲೇ ಕಾಯುವಂತಾಯಿತು. ಸುಮಾರು 20 ರಿಂದ 30 ನಿಮಿಷಗಳ ಕಾಲ ರೈಲುಗಳು ಬಾರದ ಕಾರಣ, ಸಮಯಕ್ಕೆ ಸರಿಯಾಗಿ ತಲುಪಲಾಗದೆ ಕಂಗಾಲಾದ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗಳತ್ತ ಮುಖ ಮಾಡಬೇಕಾಯಿತು.
ಬಿಎಂಆರ್ಸಿಎಲ್ ತುರ್ತು ಕ್ರಮ
ಸಮಸ್ಯೆ ಉಂಟಾದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಾಂತ್ರಿಕ ತಂಡ, ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡಿದೆ. ಆದಷ್ಟು ಬೇಗ ಪರಿಸ್ಥಿತಿಯನ್ನು ಸುಸ್ಥಿತಿಗೆ ತಂದು, ಎಂದಿನಂತೆ ರೈಲು ಸಂಚಾರವನ್ನು ಪುನರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಉಂಟಾದ ಈ ತಾತ್ಕಾಲಿಕ ಅನಾನುಕೂಲತೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಮೆಟ್ರೋ ಮಾರ್ಗಗಳಲ್ಲಿ ಪದೇ ಪದೇ ತಾಂತ್ರಿಕ ದೋಷಗಳು ಮರುಕಳಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.

