Thu. Jul 16th, 2026

ಸೆಲ್ಫಿ ಹುಚ್ಚಿಗೆ ಜಲಪಾತದ ಸುಳಿಗೆ ಸಿಲುಕಿದ ಯುವಕ; ಚೂಡಿದಾರ್ ದುಪಟ್ಟಾಗಳಿಂದ ಪ್ರಾಣ ಉಳಿಸಿದ ಪ್ರವಾಸಿಗರು!

Share this with Friends

ಪುಣೆ: ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟವಾದ ಫೋಟೋ ಹಾಗೂ ರೀಲ್ಸ್ ಪೋಸ್ಟ್ ಮಾಡುವ ಹಪಾಹಪಿಗೆ ಬಿದ್ದು ಪ್ರವಾಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಆತಂಕಕಾರಿ ಘಟನೆಗಳು ಮುಂದುವರಿದಿವೆ. ಮಹಾರಾಷ್ಟ್ರದ ಪುಣೆ ಸಮೀಪದ, ಪಶ್ಚಿಮ ಘಟ್ಟಗಳ ಮಡುವಿನಲ್ಲಿರುವ ಪ್ರಸಿದ್ಧ ಮಲ್ಷೆಜ್ ಘಾಟ್ ಪ್ರದೇಶದ “ಕಲು ಜಲಪಾತ” (Kalu Waterfall) ವೀಕ್ಷಣೆಗೆ ಬಂದಿದ್ದ ಹೈದರಾಬಾದ್ ಮೂಲದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭೀಕರವಾಗಿ ಆಯತಪ್ಪಿ ಜಲಪಾತದ ಪ್ರವಾಹದಲ್ಲಿ ಸಿಲುಕಿದ ರೋಮಾಂಚನಕಾರಿ ವಿಡಿಯೋ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸೆಲ್ಫಿ ಗೀಳು: ಸಾವಿನ ತುದಿಗೆ ತಲುಪಿದ ಯುವಕ!

ಮಳೆಗಾಲದ ಭೋರ್ಗರೆತದ ಹಿನ್ನೆಲೆಯಲ್ಲಿ ಜಲಪಾತದ ನೀರಿನ ತೀವ್ರತೆ ಹೆಚ್ಚಾಗಿದ್ದರೂ, ಈ ಯುವಕ ಅಪಾಯಕಾರಿ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಈ ವೇಳೆ ನೀರಿನ ರಭಸಕ್ಕೆ ಕಾಲು ಜಾರಿ ಜಲಪಾತದ ಪ್ರಪಾತದ ತುದಿಯತ್ತ ಕೊಚ್ಚಿಹೋಗಿದ್ದಾನೆ. ಅದೃಷ್ಟವಶಾತ್, ಆತ ಪ್ರಪಾತಕ್ಕೆ ಬಿದ್ದು ಕೊಚ್ಚಿ ಹೋಗುವ ಮುನ್ನ ಅಲ್ಲಿದ್ದ ಬಂಡೆಗಲ್ಲೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಒಂದು ವೇಳೆ ಆ ಬಂಡೆಗಲ್ಲು ಆತನ ಕೈಗೆ ಸಿಗದೇ ಹೋಗಿದ್ದರೆ ಪ್ರಾಣ ಉಳಿಯುವುದು ಹಾಗಿರಲಿ, ಮೃತದೇಹವೂ ಸಿಗದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಸಮಯಪ್ರಜ್ಞೆ ಮೆರೆದ ಜನತೆ: ಚೂಡಿದಾರ್ ದುಪಟ್ಟಾಗಳೇ ಆದವು ರಕ್ಷಾ ಕವಚ!

ಯುವಕ ಪ್ರವಾಹದಲ್ಲಿ ಸಿಲುಕಿ ಕಿರುಚಾಡುತ್ತಿದ್ದನ್ನು ಗಮನಿಸಿದ ತಕ್ಷಣ ಅಲ್ಲಿದ್ದ ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರವಾಸಿಗರು ಅದ್ಭುತ ಸಮಯಪ್ರಜ್ಞೆ ಮೆರೆದರು. ತುರ್ತು ರಕ್ಷಣೆಗೆ ಯಾವುದೇ ಹಗ್ಗ ಅಥವಾ ಸಾಧನಗಳು ಲಭ್ಯವಿಲ್ಲದ ಕಾರಣ, ತಕ್ಷಣವೇ ಅಲ್ಲಿದ್ದ ಮಹಿಳಾ ಪ್ರವಾಸಿಗರಿಂದ ಚೂಡಿದಾರ್ ದುಪಟ್ಟಾಗಳನ್ನು (Scarves) ಸಂಗ್ರಹಿಸಿ, ಅವುಗಳನ್ನು ಒಂದಕ್ಕೊಂದು ಗಟ್ಟಿಯಾಗಿ ಕಟ್ಟಿ ಬಲಿಷ್ಠವಾದ ಸರಪಳಿಯಂತಹ ಹಗ್ಗವನ್ನು ಸಿದ್ಧಪಡಿಸಿದರು. ಈ ಮಾನವ ನಿರ್ಮಿತ ಬಟ್ಟೆಯ ಹಗ್ಗವನ್ನು ನೀರಿನಲ್ಲಿ ತೇಲುತ್ತಿದ್ದ ಯುವಕನಿಗೆ ಎಸೆದು, ಎಲ್ಲರೂ ಒಟ್ಟಾಗಿ ಆತನನ್ನು ಸುರಕ್ಷಿತವಾಗಿ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರು.

ಪ್ರವಾಸಿಗರಿಗೆ ಕಡಕ್ ಎಚ್ಚರಿಕೆ

ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ಸವಿಯಲು ಹೋಗುವ ಸಾರ್ವಜನಿಕರಿಗೆ ಈ ಘಟನೆ ದೊಡ್ಡ ಪಾಠವಾಗಿದೆ. ಪ್ರವಾಸಕ್ಕೆ ಹೋಗಿ ಮಜಾ ಮಾಡಿ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದೆರಡು ವಿಶಿಷ್ಟ ಲೈಕ್ಸ್ ಮತ್ತು ಫೋಟೋಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟು ವಿಶೇಷ ಸುದ್ದಿಯಾಗಬೇಡಿ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರು ಪ್ರವಾಸಿಗರಲ್ಲಿ ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.

 

 


Share this with Friends

Related Post