Sat. Aug 29th, 2026

‘ನಾಗೇಂದ್ರ ಸಾಚಾ ಆಗಿದ್ದರೆ ರಾಜೀನಾಮೆ ಪಡೆದಿದ್ದೇಕೆ?’: ಸಿಎಂಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

Share this with Friends

ಮಂಡ್ಯ: “ಮಾಜಿ ಸಚಿವ ಬಿ. ನಾಗೇಂದ್ರ ಅವರು ಅಮಾಯಕ ಅಥವಾ ಸಾಚಾ ಆಗಿದ್ದರೆ ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆಯನ್ನು ಏಕೆ ಪಡೆದುಕೊಂಡರು? ಮಂತ್ರಿ ಸ್ಥಾನದಲ್ಲೇ ಮುಂದುವರಿಸಬಹುದಿತ್ತಲ್ಲವೇ?” ಎಂದು ಕೇಂದ್ರ ಹೆದ್ದಾರಿ ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಷಡ್ಯಂತ್ರ ಹೂಡಿ ಅಮಾಯಕ ನಾಗೇಂದ್ರ ಅವರ ರಾಜೀನಾಮೆಗೆ ಕಾರಣರಾದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಶನಿವಾರ ಖಾರವಾಗಿ ಪ್ರತಿಕ್ರಿಯಿಸಿದರು.

“ನಾಗೇಂದ್ರ ಅವರು ಅಮಾಯಕರು ಎಂದು ಮುಖ್ಯಮಂತ್ರಿಗಳು ಈಗ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಹಾಗಿದ್ದರೆ ಅವರು ದೆಹಲಿಗೆ ಯಾಕೆ ಓಡಿಹೋಗಬೇಕಿತ್ತು?” ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ನಾಗೇಂದ್ರ ಅವರು ದಲಿತ ಸಮುದಾಯದ ಹೆಸರಿನಲ್ಲಿ ರಕ್ಷಣೆ ಪಡೆಯಲು ನೋಡುವುದು ತಪ್ಪು. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ದುರುಪಯೋಗ ಆಗಿರುವುದು ಕೂಡ ಇದೇ ಬಡ ದಲಿತರ ಕಲ್ಯಾಣದ ಹಣ ಎನ್ನುವುದನ್ನು ಕಾಂಗ್ರೆಸ್ ನಾಯಕರು ಯಾಕೆ ಮರೆತು ಮಾತನಾಡುತ್ತಿದ್ದಾರೆ? ಸತ್ಯಗಳನ್ನು ಮುಚ್ಚಿಟ್ಟು ಜನರ ದಾರಿ ತಪ್ಪಿಸುವುದು ಸರಿಯಲ್ಲ” ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಮುಜುಗರವಾಗುತ್ತಿರುವುದು ಭ್ರಷ್ಟಾಚಾರದಿಂದ:

ನಾಗೇಂದ್ರ ರಾಜೀನಾಮೆ ವಿಚಾರದ ಕ್ರೆಡಿಟ್ ಯಾರಿಗೆ ಹೋಗಬೇಕು ಎಂಬುದು ಮುಖ್ಯವಲ್ಲ ಎಂದ ಅವರು, “ಕಾಂಗ್ರೆಸ್‌ಗೆ ಆಗುತ್ತಿರುವ ಮುಜುಗರ ತಪ್ಪಿಸಲು ರಾಜೀನಾಮೆ ನೀಡಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ. ಆದರೆ ಯಾವ ಕಾರಣಕ್ಕೆ ಕಾಂಗ್ರೆಸ್‌ಗೆ ಮುಜುಗರ ಆಗುತ್ತಿದೆ? ಬರೋಬ್ಬರಿ ₹87 ಕೋಟಿ ಹಗರಣದ ಲೂಟಿ ಬಯಲಾದ ಮುಜುಗರ ತಪ್ಪಿಸಲು ಅವರು ರಾಜೀನಾಮೆ ಕೊಟ್ಟಿದ್ದಾರಲ್ಲವೇ?” ಎಂದು ನೇರವಾಗಿ ಕೇಳಿದರು.

ನಾಗೇಂದ್ರ ಆರೋಪಕ್ಕೆ ಕುಮಾರಸ್ವಾಮಿ ಪ್ರತ್ಯುತ್ತರ:

“ನನ್ನ ಮೇಲೂ ಆರೋಪ ಇಲ್ಲವೇ? ನಾನು ರಾಜೀನಾಮೆ ನೀಡಿದ್ದೇನೆಯೇ?” ಎಂದು ನಾಗೇಂದ್ರ ಪ್ರಶ್ನಿಸಿರುವುದಕ್ಕೆ ಉತ್ತರಿಸಿದ ಹೆಚ್‌ಡಿಕೆ, “ನನ್ನ ಮೇಲೆ ಇರುವುದು ಕೇವಲ ರಾಜಕೀಯ ದುರುದ್ದೇಶದ ಆರೋಪಗಳು. ನಾನು ಎಲ್ಲೂ ದುಡ್ಡು ಹೊಡೆದಿದ್ದೇನೆ ಎಂಬ ಆಧಾರಗಳಿಲ್ಲ. ಕಳೆದ 14 ವರ್ಷಗಳಿಂದ ಈ ಹಳೆಯ ವಿಷಯವನ್ನು ರಾಜಕೀಯವಾಗಿ ಜೀವಂತವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಸುಳ್ಳು ಆರೋಪಗಳ ಮೂಲಕ ಕುಮಾರಸ್ವಾಮಿ ಬಾಯಿ ಮುಚ್ಚಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ” ಎಂದು ಗುಡುಗಿದರು.

“ನಾನು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನನ್ನ ಮೇಲಿನ ಹಳೆಯ ಪ್ರಕರಣಗಳನ್ನು ಮುಚ್ಚಿ ಹಾಕಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ತನಿಖೆ ನಡೆದು ಸತ್ಯಾಂಶ ಹೊರಗೆ ಬರಲಿ ಎಂದು ಹಾಗೆಯೇ ಬಿಟ್ಟಿದ್ದೇನೆ. ಆದರೆ, ನಾಗೇಂದ್ರ ಅವರು ಸಾರ್ವಜನಿಕರ ಹಣ ಲೂಟಿ ಮಾಡಿದ ಮುಜುಗರದಿಂದ ತಪ್ಪಿಸಿಕೊಳ್ಳಲು ಈಗ ರಾಜೀನಾಮೆ ನೀಡಿದ್ದಾರೆ” ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

AEE ನೇಮಕಾತಿ ಅಕ್ರಮ ಸಾಬೀತಾದರೂ ಮೌನವೇಕೆ?:

ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ (AEE) ಹುದ್ದೆಗಳ ನೇಮಕಾತಿಯಲ್ಲಿ ಕಾರ್ಬನ್ ಬಳಸಿ ಒಎಂಆರ್ ಶೀಟ್ ತಿದ್ದಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಸಾಬೀತಾಗಿದೆ. ಈ ಕುರಿತು ಸ್ವತಃ ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಗೃಹಸಚಿವ ಪ್ರಿಯಾಂಕ್ ಖರ್ಗೆ ಅವರು ಅಕ್ರಮ ಅಭ್ಯರ್ಥಿಗಳಿಗೆ ಕೆಲಸ ನೀಡಿ, ಕಳೆದ ಒಂದು ವರ್ಷದಿಂದ ಸಂಬಳ ಕೊಡುತ್ತಾ ಆರೋಪಿಗಳನ್ನು ರಕ್ಷಿಸುತ್ತಿರುವುದು ಏಕೆ ಎಂದು ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿ ಸವಾಲು ಹಾಕಿದರು.

ಪರಮೇಶ್ವರ್‌ಗೆ ಟಾಂಗ್ ಮತ್ತು ಕಾವೇರಿ ಕಾಳಜಿ:

ಯಾವಾಗಲೂ ಆರೋಪ ಮಾಡುವುದೇ ಕುಮಾರಸ್ವಾಮಿ ಕೆಲಸ ಎಂದಿದ್ದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರಿಗೆ ಟಾಂಗ್ ನೀಡಿದ ಹೆಚ್‌ಡಿಕೆ, “ನಾನು ದಾಖಲೆ ಸಮೇತ ಮಾತನಾಡುತ್ತಿದ್ದೇನೆ. ಅಕ್ರಮ ಸಾಬೀತಾಗಿದ್ದರೂ ಆ ದಾಖಲೆಗಳಿಗೆ ಗಂಧದ ಕಡ್ಡಿ ಬೆಳಗಿಕೊಂಡು ಕುಳಿತಿದ್ದೀರಾ?” ಎಂದು ಗುಡುಗಿದರು. ಇದೇ ವೇಳೆ, ಕೆಆರ್‌ಎಸ್ ಜಲಾಶಯ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನಿರಂತರ ನೀರು ಹರಿಸಲಾಗುತ್ತಿದೆ. ಆದರೂ ತಮಿಳುನಾಡು ಕೋರ್ಟ್‌ಗೆ ಹೋಗುತ್ತಿದೆ, ರಾಜ್ಯ ಸರ್ಕಾರ ಮಾತ್ರ ಸರಿಯಾದ ಸಿದ್ಧತೆ ಇಲ್ಲದೆ ನಮ್ಮ ನೆಲ-ಜಲದ ಹಿತಾಸಕ್ತಿಯನ್ನು ಬಲಿಗೊಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು

 


Share this with Friends

Related Post