Tue. Jun 23rd, 2026

ಕುಮಾರಸ್ವಾಮಿಗೆ ಮಾಗಡಿ ಶಾಸಕನ ಓಪನ್ ಚಾಲೆಂಜ್; ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದ ಹೆಚ್.ಸಿ. ಬಾಲಕೃಷ್ಣ!

Share this with Friends

ರಾಮನಗರ: ಬಿಡದಿ ನೂತನ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿ ಈಗ ಧಾರ್ಮಿಕ ಆಣೆ-ಪ್ರಮಾಣದ ಹಂತಕ್ಕೆ ತಲುಪಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಬಹಿರಂಗಪಡಿಸಲು ಧರ್ಮಸ್ಥಳ ಅಥವಾ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನೇರ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆ ಜಾರಿಗೆ ತರುತ್ತಿರುವುದು ರೈತರ ಒಳಿತಿಗಾಗಿ ಹಾಗೂ ಈ ಯೋಜನೆಗೆ ಆರಂಭಿಕ ರೂಪ ನೀಡಿದ್ದೇ ಕುಮಾರಸ್ವಾಮಿ ಅವರು ಎಂದು ವಾದಿಸಿದರು. “ಈ ಯೋಜನೆಯಲ್ಲಿ ಯಾವುದೇ ರೀತಿಯ ರಿಯಲ್ ಎಸ್ಟೇಟ್ ದಂಧೆ ಅಥವಾ ರೈತರಿಗೆ ಅನ್ಯಾಯ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಒಂದು ವೇಳೆ ಕುಮಾರಸ್ವಾಮಿ ಅವರಿಗೆ ತಮ್ಮ ವಾದದ ಮೇಲೆ ಅಷ್ಟೊಂದು ನಂಬಿಕೆ ಇದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ, ನಾವೂ ಬರಲು ಸಿದ್ಧರಿದ್ದೇವೆ” ಎಂದು ಪಂಥಾಹ್ವಾನ ನೀಡಿದ್ದಾರೆ.

ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬೈರಮಂಗಲ ಭಾಗದಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪರವಾಗಿ ನಿಂತಿರುವ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂನ್ 26 ರಂದು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಕುಮಾರಸ್ವಾಮಿ ಅವರು ಜೂನ್ 27 ರಂದು ಪ್ರತಿಭಟನಾ ನಿರತ ರೈತರ ಸಮ್ಮುಖದಲ್ಲೇ ಬೈರಮಂಗಲದಲ್ಲಿ ಬಹಿರಂಗ ಸಭೆ ನಡೆಸುವಂತೆ ಮರು ಸವಾಲು ಹಾಕಿದ್ದರು. ಈ ರಾಜಕೀಯ ಪತ್ರ ಸಮರದ ನಡುವೆಯೇ ಈಗ ಶಾಸಕ ಬಾಲಕೃಷ್ಣ ಅವರ ಆಣೆ-ಪ್ರಮಾಣದ ಸವಾಲು ವಿವಾದವನ್ನು ಮತ್ತೊಂದು ಮತಾಂತರಕ್ಕೆ ಕೊಂಡೊಯ್ದಿದೆ.

 

 


Share this with Friends

Related Post