ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಕೌಂಟ್ಡೌನ್ ಕ್ಷಣಕ್ಷಣಕ್ಕೂ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ಪ್ರಮುಖ ನಡೆಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಭಾವುಕತೆ ಹಾಗೂ ಸಂಚಲನವನ್ನು ಸೃಷ್ಟಿಸಿವೆ. ಒಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸರ್ಕಾರದ ಐತಿಹಾಸಿಕ ‘ಗ್ಯಾರಂಟಿ ಯೋಜನೆಗಳ’ ಸಾಧನೆಯನ್ನು ಸರಣಿ ಪೋಸ್ಟ್ಗಳ ಮೂಲಕ ಪ್ರದರ್ಶಿಸಿರುವ ಮುಖ್ಯಮಂತ್ರಿಗಳು, ಮತ್ತೊಂದೆಡೆ ವಿಧಾನಸೌಧದಲ್ಲಿ ನೌಕರರಿಗೆ ಕೈಮುಗಿದು ನಿರ್ಗಮಿಸುವ ಮೂಲಕ ತಾವು ಅಧಿಕಾರದಿಂದ ಕೆಳಗಿಳಿಯುತ್ತಿರುವುದರ ಸ್ಪಷ್ಟ ಮತ್ತು ಅಂತಿಮ ಸಂದೇಶ ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗ್ಯಾರಂಟಿ ಪೋಸ್ಟ್: ಏನಿದರ ಅರ್ಥ?
ಬಹುನಿರೀಕ್ಷಿತ ಜಾತಿ ಸಮೀಕ್ಷೆ ವರದಿಯನ್ನು ಸ್ವೀಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಯಶಸ್ಸಿನ ಕುರಿತು ಸುದೀರ್ಘ ಪೋಸ್ಟ್ಗಳನ್ನು ಪ್ರಕಟಿಸಿದ್ದಾರೆ. ತಾವೇ ಖುದ್ದಾಗಿ ನಿಂತು ಜಾರಿಗೆ ತಂದ ಈ ಯೋಜನೆಗಳು ಕೋಟ್ಯಂತರ ಬಡ ಕುಟುಂಬಗಳ ಬದುಕಿಗೆ ಹೇಗೆ ಆಸರೆಯಾಗಿವೆ ಎಂಬುದನ್ನು ಅವರು ಅಂಕಿ-ಅಂಶಗಳ ಸಮೇತ ಬಿಂಬಿಸಿದ್ದಾರೆ.
ರಾಜಕೀಯ ತಜ್ಞರ ಪ್ರಕಾರ, ಇದು ಸಿದ್ದರಾಮಯ್ಯ ಅವರ ‘ವಿದಾಯದ ನುಡಿ’ಯಂತಿದೆ. “ನಾನು ಅಧಿಕಾರ ಬಿಟ್ಟರೂ, ನನ್ನ ಅವಧಿಯಲ್ಲಿ ಜಾರಿಯಾದ ಈ ಗ್ಯಾರಂಟಿಗಳು ಮತ್ತು ಸಾಮಾಜಿಕ ನ್ಯಾಯದ ಯೋಜನೆಗಳು ಸದಾ ಜನರ ಮನಸ್ಸಿನಲ್ಲಿ ಇರಲಿವೆ” ಎಂದು ಇಡೀ ರಾಜ್ಯಕ್ಕೆ ಸಾರುವ ಮೂಲಕ, ತಾವು ಜನಾಶೀರ್ವಾದ ಪಡೆದ ಧೀಮಂತ ನಾಯಕ ಎಂಬುದನ್ನು ಹೈಕಮಾಂಡ್ಗೆ ಮತ್ತೊಮ್ಮೆ ನೆನಪಿಸುವ ಮಾಸ್ಟರ್ ಪ್ಲಾನ್ ಇದಾಗಿದೆ.
ವಿಧಾನಸೌಧದಲ್ಲಿ ನೌಕರರಿಗೆ ಕೈಮುಗಿದು ಭಾವುಕ ವಿದಾಯ!
ಇವೆಲ್ಲದರ ನಡುವೆ ಇಂದು ವಿಧಾನಸೌಧದಲ್ಲಿ ನಡೆದ ದೃಶ್ಯವಂತೂ ಇಡೀ ರಾಜಕೀಯ ವಲಯದ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಸಚಿವರೊಂದಿಗೆ ಸಭೆ ನಡೆಸಿ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮನ್ನು ನೋಡಲು ಕಾರಿಡಾರ್ನಲ್ಲಿ ಜಮಾಯಿಸಿದ್ದ ವಿಧಾನಸೌಧದ ನೌಕರರು ಹಾಗೂ ಸಾರ್ವಜನಿಕರತ್ತ ತಿರುಗಿ ಭಾವುಕರಾಗಿ ಎರಡು ಕೈಗಳನ್ನು ಮುಗಿದು ನಮಸ್ಕರಿಸಿದರು.
ಯಾವಾಗಲೂ ಗಂಭೀರ ಮುಖಭಾವದಿಂದ ಇರುವ ಸಿದ್ದರಾಮಯ್ಯ ಅವರ ಮುಖದಲ್ಲಿ ಇಂದು ಒಂದು ರೀತಿಯ ನಿರಾಳತೆ ಹಾಗೂ ಭಾವುಕತೆ ಎದ್ದು ಕಾಣುತ್ತಿತ್ತು. ವಿಧಾನಸೌಧದಿಂದ ತಮ್ಮ ಕಾರಿನತ್ತ ಹೆಜ್ಜೆ ಹಾಕುವ ಮುನ್ನ ನೌಕರರಿಗೆ ಕೈಮುಗಿದ ಈ ನಡೆ, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಸಂಪೂರ್ಣವಾಗಿ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಮತ್ತು ನಾಳೆ ಅಧಿಕೃತವಾಗಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಧಿಕಾರಾವಧಿಯಲ್ಲಿ ತಮಗೆ ಸಹಕರಿಸಿದ ಇಡೀ ಆಡಳಿತ ಯಂತ್ರಕ್ಕೆ ಅವರು ಈ ಮೂಲಕ ಗೌರವಯುತ ಕೃತಜ್ಞತೆ ಸಲ್ಲಿಸಿ ನಿರ್ಗಮಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

