ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಆಕ್ಷನ್ ಮೂಡ್ಗೆ ಇಳಿದಿರುವ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘವಾಗಿ ನಡೆದ ಈ ಸಭೆಯ ಬಳಿಕ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಹೊಸ “ಯುವ ಯುಗ”ಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ 6 ಪ್ರಮುಖ ವರ್ಗದ ಜನರಿಗಾಗಿ ಐತಿಹಾಸಿಕ ಆಡಳಿತಾತ್ಮಕ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.
ರಾಜ್ಯದ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ ಕಳೆದ ಆರು ತಿಂಗಳಿಂದಲೇ ತಜ್ಞರೊಂದಿಗೆ ತೆರೆಮರೆಯ ಸಿದ್ಧತೆ ನಡೆಸಲಾಗಿತ್ತು ಎಂದು ತಿಳಿಸಿದ ಸಿಎಂ, ಕೇವಲ ಭರವಸೆ ಕೊಡುವುದಲ್ಲ, ಅದನ್ನು ಜಾರಿಗೆ ತರುವುದೇ ನಮ್ಮ ಸರ್ಕಾರದ ಆದ್ಯತೆ ಎಂದಿದ್ದಾರೆ.
ನೂತನ ಸರ್ಕಾರ ಘೋಷಿಸಿರುವ ಆರು ಮಹತ್ವದ ಘೋಷಣೆ (6 Major Decisions):
ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲು ನಿರ್ಧಾರ.
ಉದ್ಯೋಗ ಸೃಷ್ಟಿ: ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡುವುದರ ಜೊತೆಗೆ, ಖಾಸಗಿ ವಲಯದಲ್ಲಿ ಉದ್ಯೋಗ ವಿನಿಮಯಕ್ಕಾಗಿ ಅತ್ಯಾಧುನಿಕ ವ್ಯವಸ್ಥೆಯ ಜಾರಿ.
ಯುವಕರ ಸಂಘ ಮತ್ತು ಭಾರಿ ಅನುದಾನ: ಗ್ರಾಮೀಣ ಭಾಗದ ಯುವಶಕ್ತಿಯ ಬಲವರ್ಧನೆಗಾಗಿ ಪ್ರತಿ ಪಂಚಾಯಿತಿಗೆ ಒಂದರಂತೆ ರಾಜ್ಯಾದ್ಯಂತ 10 ಸಾವಿರ ಯುವಕರ ಸಂಘಗಳ ಸ್ಥಾಪನೆ ಹಾಗೂ ಪ್ರತಿ ಸಂಘಕ್ಕೆ 10 ಲಕ್ಷ ರೂಪಾಯಿ ವಿಶೇಷ ಅನುದಾನ.
ಆಸ್ತಿ ಮಾಲೀಕರಿಗೆ ನಿರಾಳ: ಬಿ ಖಾತಾ ಹೊಂದಿರುವ ಆಸ್ತಿಗಳನ್ನು ನಿಯಮಾನುಸಾರ ಸಂಪೂರ್ಣವಾಗಿ ‘ಎ ಖಾತಾ’ ಆಗಿ ಪರಿವರ್ತಿಸಲು ಮತ್ತು ಒಸಿ-ಸಿಸಿ (OC-CC) ಸಮಸ್ಯೆಗಳಿಗೆ ಶಾಶ್ವತ ಪರಿಹಾರ.
ಬೆಂಗಳೂರು ರಸ್ತೆಗಳ ಸುಧಾರಣೆ: ರಾಜಧಾನಿ ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ತಕ್ಷಣವೇ 2 ಸಾವಿರ ಕೋಟಿ ರೂಪಾಯಿಗಳ ಭಾರಿ ಅನುದಾನ ಬಿಡುಗಡೆ.
ವಲಸೆ ತಡೆ ಹಾಗೂ ಕೃಷಿ ವಲಯಕ್ಕೆ ಆದ್ಯತೆ: ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಹಳ್ಳಿಗಳಿಂದ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಿಗೆ ಹೊಸ ನೀತಿಗಳ ರೂಪೀಕರಣ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, “ರೈತರ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾನೇ ಬೆಂಗಳೂರಿನ ನಗರಾಭಿವೃದ್ಧಿ ಹಾಗೂ ಕಸ ವಿಲೇವಾರಿ ವಿಚಾರದಲ್ಲಿ ಎಷ್ಟು ಸವಾಲುಗಳಿರುತ್ತವೆ ಎಂಬುದನ್ನು ಮೂರು ವರ್ಷಗಳ ಕಾಲ ಹತ್ತಿರದಿಂದ ಅನುಭವಿಸಿದ್ದೇನೆ. ಆದ್ದರಿಂದ ಯಾವುದೇ ಸಂಕುಚಿತ ಮನೋಭಾವವಿಲ್ಲದೆ, ಎಲ್ಲಾ ವರ್ಗದ ಜನರಿಗೆ ಮುಕ್ತವಾಗಿ ತಲುಪುವ ಸುಸ್ಥಿರ ಆಡಳಿತ ನೀಡಲು ನಮ್ಮ ಸಂಪುಟ ಸಜ್ಜಾಗಿದೆ” ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

