ಬೆಂಗಳೂರು: ನೇರಳೆ ಮಾರ್ಗದ ಮೆಟ್ರೋ ಹಳಿಯ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ, ಏಪ್ರಿಲ್ 5ರ ಭಾನುವಾರ ಬೆಳಿಗ್ಗೆ ಎರಡು ಗಂಟೆಗಳ ಕಾಲ ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಬೆಳಿಗ್ಗೆ 7 ರಿಂದ 9 ರವರೆಗೆ ಸ್ಥಗಿತ:
ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕೆಲಸ ನಡೆಯಲಿರುವ ಕಾರಣ, ಅಂದು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಮೈಸೂರು ರಸ್ತೆ ನಡುವೆ ರೈಲುಗಳು ಓಡುವುದಿಲ್ಲ. ಬೆಳಿಗ್ಗೆ 9:00 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ಸೇವೆ ಲಭ್ಯವಿರಲಿದೆ.
ಇತರೆ ಮಾರ್ಗಗಳಲ್ಲಿ ಸಂಚಾರ ಯಥಾಸ್ಥಿತಿ:
ಬಾಧಿತ ಅವಧಿಯಲ್ಲಿ ಉಳಿದ ವಿಭಾಗಗಳಾದ ಚಲ್ಲಘಟ್ಟದಿಂದ ಮೈಸೂರು ರಸ್ತೆ, ಮೆಜೆಸ್ಟಿಕ್ನಿಂದ ವೈಟ್ಫೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಹಾಗೂ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವೆ ಮೆಟ್ರೋ ರೈಲುಗಳು ಬೆಳಿಗ್ಗೆ 7:00 ಗಂಟೆಯಿಂದಲೇ ವೇಳಾಪಟ್ಟಿಯಂತೆ ಸಂಚರಿಸಲಿವೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕೆಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ವಿನಂತಿಸಿದೆ.

