ಬೆಂಗಳೂರು:ನವೆಂಬರ್ ನಲ್ಲಿ ರೈಲ್ವೆ ರಕ್ಷಣಾ ಪಡೆ 07 ಹೆಣ್ಣುಮಕ್ಕಳನ್ನು ಒಳಗೊಂಡಂತೆ ಒಟ್ಟು 41 ಮಕ್ಕಳನ್ನು ರಕ್ಷಿಸಿದ್ದು, ಇದರೊಂದಿಗೆ 08 ಮಂದಿಯನ್ನು ಬಂಧಿಸಿ, ರೂ. 30,41,000/- ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೈರುತ್ಯ ರೈಲ್ವೆ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ (RPF) ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶಗಳು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಸದಾ ಬದ್ಧವಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ, ಭದ್ರ ಮತ್ತು ಸುಗಮ ಪ್ರಯಾಣದ ಅನುಭವ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.ನವೆಂಬರ್ 2025ರಲ್ಲಿ ರೈಲ್ವೆ ರಕ್ಷಣಾ ಪಡೆ ಪ್ರಯಾಣಿಕರ ಸುರಕ್ಷತೆ, ಭದ್ರತೆ ಹಾಗೂ ಸೌಕರ್ಯ ಖಚಿತಪಡಿಸಲು ನಿರಂತರವಾಗಿ ಕೆಲಸ ಮಾಡಿ. ಭಾರತೀಯ ರೈಲ್ವೆಯ ವಿಶ್ವಾಸಾರ್ಹ ಸರಕು ಸಾಗಣಾ ಸೇವೆಗೂ ಮಹತ್ವದ ಸಹಕಾರ ನೀಡಿದೆ ಎಂದಿದ್ದಾರೆ.
ಕಾರ್ಯಾಚರಣೆ ವಿವರ:
“ನನ್ಹೆ ಫರಿಷ್ಠೆ” ಕಾರ್ಯಾಚರಣೆ – ಮಕ್ಕಳ ರಕ್ಷಣೆಯ ಯತ್ನ:
ಈ ಅಭಿಯಾನದಡಿ ರೈಲ್ವೆ ರಕ್ಷಣಾ ಪಡೆ ಒಟ್ಟು 41 ಮಕ್ಕಳು (34 ಹುಡುಗರು ಮತ್ತು 07 ಹುಡುಗಿಯರು) ರಕ್ಷಣೆಯ ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಪುನಃ ಸೇರಿಸಲು ಪ್ರಮುಖ ಪಾತ್ರ ವಹಿಸಿದೆ. ಈ ಮಕ್ಕಳು ವಿವಿಧ ಕಾರಣಗಳಿಂದ ತಮ್ಮ ಕುಟುಂಬಗಳಿಂದ ಬೇರ್ಪಟ್ಟಿದ್ದರು. ಅವರನ್ನು ರಕ್ಷಿಸಿ ಎನ್ಜಿಓಗಳು ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿದ್ದಾರೆ.
“ಡಿಗ್ನಿಟಿ” ಕಾರ್ಯಾಚರಣೆ:
ಈ ಕಾರ್ಯಾಚರಣೆಯಡಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಒಟ್ಟು 6 ವೃದ್ಧರನ್ನು (4 ಪುರುಷ ಮತ್ತು 2 ಮಹಿಳೆಯರು) ರಕ್ಷಿಸಿ ಅವರ ಕುಟುಂಬಗಳಿಗೆ ಅಥವಾ ಎನ್ಜಿಓಗಳಿಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.
ಮಹಿಳಾ ಪ್ರಯಾಣಿಕರ ಶಕ್ತೀಕರಣ – “ಮೇರಿ ಸಹೇಲಿ” ಅಭಿಯಾನ:
ಈ ಮಹಿಳಾ ಕೇಂದ್ರಿತ ಯೋಜನೆಯಡಿ, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳು ಒಂಟಿಯಾಗಿ ಅಥವಾ ಸಂಗಾತಿಯಿಲ್ಲದೆ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಖಚಿತಪಡಿಸಿದರು. ಅವರ ಸೀಟ್ ಹಾಗೂ ಬರ್ತ್ ವಿವರಗಳನ್ನು ಮಾರ್ಗದಲ್ಲಿನ ಸ್ಟೇಷನ್ಗಳ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಹಂಚಲಾಗುತ್ತದೆ. ಪ್ರಯಾಣದ ಅಂತ್ಯದಲ್ಲಿ ಮಹಿಳಾ ಪ್ರಯಾಣಿಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತದೆ. ಪ್ರಸ್ತುತ 32 ರೈಲುಗಳನ್ನು ಈ ಅಭಿಯಾನದಡಿ ಒಳಗೊಂಡಿದೆ ಎಂದಿದ್ದಾರೆ.
“ಉಪಲಬ್ಧ” ಕಾರ್ಯಾಚರಣೆ – ಟಿಕೆಟ್ ದಂಧೆ ವಿರುದ್ಧದ ಕ್ರಮ:
ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಯುತವಾಗಿ ಟಿಕೆಟ್ಗಳು ಲಭ್ಯವಾಗಲು ಮತ್ತು ಕಪ್ಪುಬಜಾರಿನ ತಡೆಗಟ್ಟಲು ಕರ್ನಾಟಕ ಹಾಗೂ ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳಲ್ಲಿ ತಪಾಸಣೆ ನಡೆಸಲಾಯಿತು. ಇದರ ಫಲವಾಗಿ 14 ಪ್ರಕರಣಗಳಲ್ಲಿ 14 ದಂಧೆಗಾರರನ್ನು ಬಂಧಿಸಲಾಯಿತು. ಒಟ್ಟು 22 ಟಿಕೆಟ್ಗಳು (₹30,636 ಮೌಲ್ಯ) ಮತ್ತು 130 ಬಳಕೆಮುಗಿದ ಟಿಕೆಟ್ಗಳು (₹1,73,223 ಮೌಲ್ಯ) ವಶಪಡಿಸಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
“ಸತರ್ಕ” ಮತ್ತು “ನಾರ್ಕೋ” ಕಾರ್ಯಾಚರಣೆ – ನಿಷೇಧಿತ ವಸ್ತುಗಳ ವಶಪಡಿಕೆ:
a) ಸತರ್ಕ ಕಾರ್ಯಾಚರಣೆಯಡಿ, ಒಟ್ಟು 10 ಮದ್ಯ ಪ್ರಕರಣಗಳಲ್ಲಿ 384 ಮದ್ಯದ ಬಾಟಲಿಗಳು (110 ಲೀಟರ್) ರೂ. 68,994 ಮೌಲ್ಯದಲ್ಲಿ ವಶಪಡಿಸಕೊಳ್ಳಲಾಯಿತು ಮತ್ತು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು.
b) ನಾರ್ಕೋ ಕಾರ್ಯಾಚರಣೆಯಡಿ, 7 ಪ್ರಕರಣಗಳಲ್ಲಿ 63.966 ಕೆ.ಜಿ ಗಾಂಜಾ (ರೂ. 30.41 ಲಕ್ಷ ಮೌಲ್ಯ) ವಶಪಡಿಸಿಕೊಂಡು 3 ಅಪರಾಧಿಗಳನ್ನು ಬಂಧಿಸಲಾಯಿತು. ಅವರನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಕಳೆದುಹೋದ ವಸ್ತುಗಳ ಪುನಃ ಹಸ್ತಾಂತರ:
ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳು 69 ಸಂದರ್ಭಗಳಲ್ಲಿ ಪ್ರಯಾಣಿಕರು ಬಿಟ್ಟುಹೋದ ಲ್ಯಾಪ್ಟಾಪ್ಗಳು, ಮೊಬೈಲ್ಗಳು, ಆಭರಣಗಳು ಹಾಗೂ ಇತರ ವೈಯಕ್ತಿಕ ವಸ್ತುಗಳು ಸೇರಿದಂತೆ ಒಟ್ಟು ರೂ. 15,18,107 ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಿಂತಿರುಗಿಸಿದರು ಎಂದಿದ್ದಾರೆ.
“ಯಾತ್ರಿ ಸುರಕ್ಷಾ” ಕಾರ್ಯಾಚರಣೆ – ಪ್ರಯಾಣಿಕರ ರಕ್ಷಣೆಗೆ:
7 ಸಂದರ್ಭಗಳಲ್ಲಿ, 7 ಶಂಕಿತ ಕಳ್ಳರು/ಪಿಕ್ಪಾಕೆಟ್ಗಳ್ಳರನ್ನು (ToPB ಅಪರಾಧಿಗಳು) ಬಂಧಿಸಿ ಮುಂದಿನ ಕ್ರಮಕ್ಕಾಗಿ ಗವರ್ನಮೆಂಟ್ ರೈಲ್ವೆ ಪೊಲೀಸ್ /ಹುಬ್ಬಳ್ಳಿಗೆ ಹಸ್ತಾಂತರಿಸಲಾಯಿತು ಎಂದಿದ್ದಾರೆ.
ರೈಲು ಪೆಟ್ರೋಲಿಂಗ್ ಮತ್ತು ಎಸ್ಕಾರ್ಟಿಂಗ್:
ಪ್ರತಿ ದಿನ ಸರಾಸರಿ 30 ರಿಂದ 35 ಎಕ್ಸ್ಪ್ರೆಸ್ ಮತ್ತು ವಿಶೇಷ ರೈಲುಗಳಲ್ಲಿ ಒಟ್ಟು 90 ರಿಂದ 95 RPF ಸಿಬ್ಬಂದಿಗಳು ಎಸ್ಕಾರ್ಟ್ ಕರ್ತವ್ಯ ನಿರ್ವಹಿಸಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು.
ರೈಲ್ವೆ ಆಸ್ತಿ (ಅನಧಿಕೃತ ವಶದಲ್ಲಿರುವುದು) ಕಾಯ್ದೆ 1966:
ಈ ಕಾಯ್ದೆಯಡಿ 11 ಪ್ರಕರಣಗಳು ದಾಖಲಾಗಿದ್ದು, 08 ಅಪರಾಧಿಗಳನ್ನು ಬಂಧಿಸಲಾಯಿತು. ರೂ. 1,16,099 ಮೌಲ್ಯದ ಕಳವಾದ ರೈಲ್ವೆ ಆಸ್ತಿಯನ್ನು ವಶಪಡಿಸಕೊಳ್ಳಲಾಯಿತು ಎಂದು ತಿಳಿಸುತ್ತಾ ನೈಋತ್ಯ ರೈಲ್ವೆಯ ಮಹಾ ಪ್ರಬಂಧಕ ಮುಖುಲ್ ಸರನ್ ಮಥುರ್ ಅವರು ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಪ್ರತಿಯೊಬ್ಬ ಪ್ರಯಾಣಿಕರ ಕಲ್ಯಾಣಕ್ಕಾಗಿ ರೈಲ್ವೆಯು ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

