Tue. Aug 11th, 2026

3 ತಿಂಗಳಿಟ್ರೂ ಬರ್ಗರ್ ಕೆಡಲ್ಲ ಅಂದ್ರೆ ಹೇಗೆ?: ಎಂಎನ್‌ಸಿ ಕಂಪನಿಗಳಿಗೆ ಸಚಿವ ಖಾದರ್ ನೋಟಿಸ್ ಎಚ್ಚರಿಕೆ

Share this with Friends

ಬೆಂಗಳೂರು: “ಸಾಮಾನ್ಯವಾಗಿ ಮನೆಯಲ್ಲಿ ಮಾಡಿದ ಬನ್ ಮರುದಿನವೇ ಗಟ್ಟಿಯಾಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳ (MNC) ಬರ್ಗರ್‌ಗಳು ಮೂರರಿಂದ ನಾಲ್ಕು ತಿಂಗಳಾದರೂ ಕೆಡದೆ ಹಾಗೆಯೇ ಇರುತ್ತವೆ ಎಂದರೆ ಅದರಲ್ಲಿ ಎಷ್ಟು ರಾಸಾಯನಿಕಗಳನ್ನು ಬಳಸರಬಹುದು? ಈ ಬಗ್ಗೆ ನಾವು ಈಗಾಗಲೇ ಆಯಾ ಕಂಪನಿಗಳಿಗೆ ನೋಟಿಸ್ ನೀಡಿ ಉತ್ತರ ಕೇಳಿದ್ದೇವೆ” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಬೆಂಗಳೂರಿನ ವಿವಿಧ ಪ್ರಮುಖ ಹೋಟೆಲ್‌ಗಳು ಹಾಗೂ ಫಾಸ್ಟ್‌ಫುಡ್ ಜಾಯಿಂಟ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸುತ್ತಿರುವ ಸರಣಿ ದಾಳಿಗಳ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದರೆ ಕ್ರಮ:

ಮಾರುಕಟ್ಟೆಯಲ್ಲಿ ಸಿಗುವ ಜಂಕ್ ಫುಡ್‌ಗಳು ಹಾಗೂ ಬರ್ಗರ್‌ಗಳನ್ನು ದೀರ್ಘಕಾಲ ಕೆಡದಂತೆ ಇಡಲು ಮಿತಿಮೀರಿದ ಕೆಮಿಕಲ್‌ಗಳನ್ನು ಬಳಸಲಾಗುತ್ತಿದೆ. ಇದು ಸಾರ್ವಜನಿಕರ, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಗ್ರಾಹಕರಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಯಮ ಉಲ್ಲಂಘಿಸಿರುವ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ತಾರತಮ್ಯವಿಲ್ಲದೆ ಹೋಟೆಲ್‌ಗಳ ಮೇಲೆ ದಾಳಿ:

ಬೆಂಗಳೂರಿನ ಸಣ್ಣ ಹೋಟೆಲ್‌ಗಳಿಂದ ಹಿಡಿದು ಪಂಚತಾರಾ (ಫೈವ್ ಸ್ಟಾರ್) ಹೋಟೆಲ್‌ಗಳವರೆಗೂ ಆಹಾರ ಸುರಕ್ಷತಾ ಇಲಾಖೆಯು ಯಾವುದೇ ತಾರತಮ್ಯವಿಲ್ಲದೆ ತಪಾಸಣೆ ನಡೆಸುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ರೀತಿಯ ದಿಢೀರ್ ದಾಳಿಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ. ಸ್ವಚ್ಛತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಯು.ಟಿ. ಖಾದರ್ ಎಚ್ಚರಿಸಿದ್ದಾರೆ.

ರಾಜ್ಯಾದ್ಯಂತ ಗ್ರಾಹಕರಿಗೆ ಸರಬರಾಜಾಗುತ್ತಿರುವ ಆಹಾರದ ಗುಣಮಟ್ಟದ ಕುರಿತು ವ್ಯಾಪಕ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ನಿರಂತರ ನಿಗಾ ಇಡಲು ಆರೋಗ್ಯ ಇಲಾಖೆಯಿಂದ 30 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರಕಟಿಸಿದರು.

ಶಾಲೆ ಮತ್ತು ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಬರ್ಗರ್, ಪಿಜ್ಜಾ ಸೇರಿದಂತೆ ಎಲ್ಲಾ ರೀತಿಯ ಜಂಕ್ ಫುಡ್‌ಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಕ್ಕಳಲ್ಲಿ ಉತ್ತಮ ಆಹಾರ ಪದ್ಧತಿ ಬೆಳೆಸಲು ಮತ್ತು ಜೀವನಶೈಲಿ ಕಾಯಿಲೆಗಳನ್ನು ತಡೆಯಲು ಈ ಕ್ರಮ ಅಗತ್ಯ ಎಂದಿದ್ದಾರೆ.

ಶಾಲಾ ಸುತ್ತಮುತ್ತ ಕಠಿಣ ನಿಯಮ: ಶಾಲಾ-ಕಾಲೇಜುಗಳ ಆವರಣದಿಂದ 50 ಮೀಟರ್ ವ್ಯಾಪ್ತಿಯಲ್ಲಿ ಅತಿಯಾದ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಾಂಶವಿರುವ (HFSS) ಆಹಾರ ಪದಾರ್ಥಗಳ ಜಾಹೀರಾತು, ಪ್ರಚಾರ ಹಾಗೂ ಮುಕ್ತ ವಿತರಣೆಯನ್ನು ನಿರ್ಬಂಧಿಸಲಾಗುವುದು. ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಆಹಾರ ಸುರಕ್ಷತಾ ಕಾಯ್ದೆಯಡಿ ₹3 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಹಾರ ಪರೀಕ್ಷಾ ಪ್ರಯೋಗಾಲಯಗಳ ನವೀಕರಣ: ರಾಜ್ಯದಲ್ಲಿ ಆಹಾರದ ಮಾದರಿಗಳನ್ನು ಶೀಘ್ರವಾಗಿ ಪರೀಕ್ಷಿಸಲು ಸದ್ಯ ಇರುವ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು (Food-testing labs) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀಕರಿಸಲಾಗುವುದು ಮತ್ತು ನಿಯಮಾವಳಿಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ದೂರು ನೀಡಲು ಸಾರ್ವಜನಿಕರಿಗೆ ಕರೆ: ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಸರಬರಾಜು ಅಥವಾ ಅಸ್ವಚ್ಛತೆ ಕಂಡುಬಂದಲ್ಲಿ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುವ ಜೊತೆಗೆ, ಎಫ್‌ಎಸ್‌ಎಸ್‌ಎಐ (FSSAI) ಸಹಾಯವಾಣಿಗೆ ಕರೆ ಮಾಡಿ ನೇರವಾಗಿ ದೂರು ದಾಖಲಿಸಬಹುದು. ಸಾರ್ವಜನಿಕರ ದೂರುಗಳ ಆಧಾರದ ಮೇಲೆಯೇ ಈ ದಾಳಿಗಳನ್ನು ತೀವ್ರಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post