ಬೆಂಗಳೂರು: “ಹೈಸ್ಪೀಡ್ ರೈಲು ತಂತ್ರಜ್ಞಾನವು ಅತ್ಯಂತ ಸಂಕೀರ್ಣವಾಗಿದ್ದು, ಅದರ ಸ್ವದೇಶಿ ಅಭಿವೃದ್ಧಿಯು ಭಾರತದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲಾಗಿದೆ,” ಎಂದು ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಬೆಂಗಳೂರಿನ ಬಿಇಎಂಎಲ್ (BEML) ತಿಪ್ಪಸಂದ್ರ ಕ್ಯಾಂಪಸ್ನಲ್ಲಿ ಹೈಸ್ಪೀಡ್ ರೈಲು ತಯಾರಿಕೆಗಾಗಿಯೇ ಮೀಸಲಿಟ್ಟ ವಿಶೇಷ ಸಂಕೀರ್ಣ ‘ಆದಿತ್ಯ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಿಪ್ಪಸಂದ್ರ ಘಟಕದ ಎಂಜಿನಿಯರಿಂಗ್ ಪ್ರೌಢಿಮೆಯನ್ನು ಶ್ಲಾಘಿಸಿದ ಸಚಿವರು, “ಮುಂದಿನ ಪೀಳಿಗೆಯ ರೋಲಿಂಗ್ ಸ್ಟಾಕ್ ಅಭಿವೃದ್ಧಿಯಲ್ಲಿ ಈ ಘಟಕದ ಎಂಜಿನಿಯರ್ಗಳ ಕೊಡುಗೆ ಅಪಾರ. ವಿಕಸಿತ ಭಾರತದ ನಿರ್ಮಾಣದಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಜಾಗೃತಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ,” ಎಂದು ತಮ್ಮ ಹೇಳಿಕೆಯಲ್ಲಿ ಪುನರುಚ್ಚರಿಸಿದರು.
ಪ್ರಯಾಣದ ಅವಧಿಯಲ್ಲಿ ಭಾರೀ ಕಡಿತ:
ವೇಗದ ರೈಲುಗಳು ಎರಡು ನಗರಗಳನ್ನು ಒಂದೇ ಆರ್ಥಿಕ ವಲಯವನ್ನಾಗಿ ಹೇಗೆ ರೂಪಿಸುತ್ತವೆ ಎಂಬುದನ್ನು ವಿವರಿಸಿದ ಸಚಿವರು, “ಹೈಸ್ಪೀಡ್ ರೈಲುಗಳ ಕಾರ್ಯಾಚರಣೆ ಆರಂಭವಾದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಅವಧಿ ಕೇವಲ 73 ನಿಮಿಷಗಳಿಗೆ ಇಳಿಕೆಯಾಗಲಿದೆ. ಇದು ಪ್ರಮುಖ ನಗರಗಳನ್ನು ಒಂದೇ ವಿಸ್ತೃತ ನಗರ ವ್ಯವಸ್ಥೆಯನ್ನಾಗಿ ಪರಿವರ್ತಿಸಲಿದೆ,” ಎಂಬ ಆಶಯ ವ್ಯಕ್ತಪಡಿಸಿದರು. ಪ್ರಸ್ತುತ ‘ಆದಿತ್ಯ’ ಸಂಕೀರ್ಣದಲ್ಲಿ ಬಿ-28 ಸುಧಾರಿತ ಕೋಚ್ಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.
ರಾಜ್ಯಕ್ಕೆ ಹೊಸ ರೈಲುಗಳ ಸರಣಿ:
ಕರ್ನಾಟಕದ ರೈಲ್ವೆ ಸಂಪರ್ಕದ ಬಗ್ಗೆ ಮಾತನಾಡುತ್ತಾ ಹಲವು ಸಿಹಿ ಸುದ್ದಿಗಳನ್ನು ಸಚಿವರು ಹಂಚಿಕೊಂಡರು:
ಬೆಂಗಳೂರು-ಮಂಗಳೂರು ವಂದೇ ಭಾರತ್: ಕರಾವಳಿ ಮತ್ತು ರಾಜಧಾನಿ ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಹಾಸನ-ಮಂಗಳೂರು ಘಾಟ್ ವಿಭಾಗದಲ್ಲಿ ಸುರಕ್ಷತೆಗಾಗಿ ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್’ (AEB) ವ್ಯವಸ್ಥೆ ಅಳವಡಿಸಿ ತಾಂತ್ರಿಕ ಅಡೆತಡೆ ನಿವಾರಿಸಲಾಗಿದೆ.
ವಂದೇ ಭಾರತ್ ಸ್ಲೀಪರ್: ದೂರದ ಪ್ರಯಾಣಕ್ಕಾಗಿ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಹಳಿಗೆ ಬರಲಿವೆ.
ಮುಂಬೈ ಸಂಪರ್ಕ: ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ಹೊಸ ಎಲ್ಎಚ್ಬಿ (LHB) ಕೋಚ್ಗಳ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ.
ಮಡಗಾಂವ್ ಸೇರಿದಂತೆ ರಾಜ್ಯದ ಇತರ ಕರಾವಳಿ ನಗರಗಳನ್ನು ರೈಲ್ವೆ ಜಾಲದೊಂದಿಗೆ ಮತ್ತಷ್ಟು ಬಲವಾಗಿ ಬೆಸೆಯುವ ಚಿಂತನೆ ಇದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

