ಬೆಂಗಳೂರು: ಶಾಮನೂರು ಶಿವಶಂಕರಪ್ಪ ಇಲ್ಲದಿರುವ ಈ ಸಂದರ್ಭದಲ್ಲಿ ವೀರಶೈವ ಮಹಾಸಭೆಯ ನೇತೃತ್ವದಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು. ಮಹಾಸಭೆ ಭವಿಷ್ಯ ಉಜ್ವಲವಾದಾಗ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇತ್ತೀಚೆಗೆ ನಿಧನ ಹೊಂದಿದ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಬೆಂಗಳೂರಿನ ತರಳಬಾಳು ಮಠದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ದಿ. ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ಭವಿಷ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಾಮಾಜಿಕ ರಾಜಕೀಯ ಸವಾಲುಗಳನ್ನು ನಿಭಾಯಿಸಲು ಮಹಾಸಭೆ ಅಡಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಶಾಮನೂರು ಶಿವ ಶಂಕರಪ್ಪ ಅವರಿಗೆ ವಯಸ್ಸಿಗೆ ಮೀರಿದ ಸ್ನೇಹಿತರಿದ್ದರು. ಸಮಯ ಪ್ರಜ್ಞೆ ಅವರಿಗೆ ಇತ್ತು ಹಣಕಾಸಿನ ಪ್ರಜ್ಣೆ ಅವರಲ್ಲಿ ಇತ್ತು. ಅವರು ಮಾಡಿರುವ ದಾನಗಳು ಸಾರ್ಥಕತೆ ಕೂಡಿದ್ದವು. ಹಾಸ್ಟೇಲ್, ಶಿಕ್ಷಣ ಸಂಸ್ಥೆ ದೇವಸ್ತಾನಕ್ಕೆ ದಾನ ಕೊಟ್ಡಿದ್ದಾರೆ. ಸಮಾಜ ಕಟ್ಟುವಲ್ಲಿ ಬಹಳ ಶ್ರಮ ವಹಿಸಿದ್ದರು. ಮುಖ್ಯಮಂತ್ರಿಯನ್ನೇ ಬಿಡಲಿಲ್ಲ ಅವರು ಸಮಾಜದ ಸಲುವಾಗಿ ನಿಷ್ಟುರವಾಗಿದ್ದರು. ಸಮಾಜ ಒಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇವೆ. ಶಾಮನೂರು ಶಿವಶಂಕರಪ್ಪ ಅವರು ಇಲ್ಲದಿರುವಾಗ ಮಹಾಸಭೆಯನ್ನು ಉಳಿಸಿಕೊಂಡು ಹೊಗುವ ದೊಡ್ಡ ಜವಾಬ್ದಾರಿ ಈಶ್ವರ ಖಂಡ್ರೆಯವರ ಮೇಲೆ ಇದೆ. ಅದನ್ನು ನಿಭಾಯಿಸುತ್ತಾರೆ ಎನ್ನುವ ವಿಶ್ವಾಸ ಇದೆ. ಬಹಳ ದೊಡ್ಡ ಸಮಾಜ, ಬಹಳ ಬುದ್ದಿ ವಂತರು, ಇದ್ದಾಗ ನಿಭಾಯಿಸುವುದು ಕಷ್ಟ. ವೀರಶೈವ ಮಹಾಸಭೆಯ ನೇತೃತ್ವದಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು. ಮಹಾಸಭೆ ಕಟ್ಟಲು ಎಲ್ಲರೂ ಸಮಯ ಕೊಡಬೇಕು. ಆ ಮಹಾಸಭೆ ಭವಿಷ್ಯ ಉಜ್ವಲವಾದಾಗ ಮಾತ್ರ ಶಾಮನೂರು ಶಿವಶಂಕರಪ್ಪ ಅವರಿಗೆ ನಿಜವಾದ ಶ್ರದ್ದಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಒಬ್ಬ ಮನುಷ್ಯನಿಗೆ ಎರಡು ವಿಚಾರ ಬಹಳ ಕಷ್ಟ, ಹುಟ್ಟಿದಾಗ ಮಕ್ಕಳ ಮುಖ ಬಹಳ ಮುಗ್ದವಾಗಿರುತ್ತವೆ. ದೊಡ್ಡವರಾದ ಮೇಲೆ ಮಗ್ದತೆ ಇರುವುದಿಲ್ಲ. ಯಾಕೆಂದರೆ ಮನಸ್ಸು ಶುದ್ದ ಇರುವುದಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮುಖದಲ್ಲಿ ಮಗುವಿನ ಮುಗ್ದತೆ ಇತ್ತು. ಅವರು ಶ್ರೀಮಂತಿಕೆಯನ್ನು ಎಲ್ಲೂ ತೋರಿಸಿಕೊಡಲಿಲ್ಲ. ನಾನು ದಾವಣಗೆರೆಯವರು ಎಲ್ಲರೂ ಶೆಟ್ಟರೆ ಎಂದು ಹೇಳುತ್ತಿದ್ದೆ. ಆದರೆ ಅವರು ಎಂದೂ ದರ್ಪ ತೋರಿಸಲಿಲ್ಲ. ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಕಷ್ಟ ಅವರು ಇದ್ದದ್ದು ಇದ್ದಂಗೆ ನುಡಿಯುತ್ತಿದ್ದರು. ನಮಗೆ ಅಂದುಕೊಂಡಂಗೆ ಬದುಕುವುದು ಕಷ್ಟ, ಇನ್ನೊಬ್ಬರ ಸಲುವಾಗಿ ಬದುಕುತ್ತೇವೆ ಶಾಮನೂರು ತಮ್ಮ ಇಚ್ಚೆಯಂತೆ ಬದುಕಿದರು.ಶ್ರೀಮಂತ ಇದ್ದರೂ ಶ್ರೀಮಂತಿಕೆ ತೋರಿಸಲಿಲ್ಲ. ಎಲ್ಲ ಕ್ಷೆತ್ರದಲ್ಲಿ ಸಾಧನೆ ಮಾಡಿದರೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಈಶ್ಬರ ಖಂಡ್ರೆ, ಡಾ. ಶರಣ ಪ್ರಕಾಶ ಪಾಟೀಲ್, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹಾಗೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.

