Sat. Jun 6th, 2026

ದಾವಣಗೆರೆಯಲ್ಲಿ ಹೈಡ್ರಾಮಾ: ಬಿಜೆಪಿ ಕಚೇರಿ ಮುಂದೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ

Share this with Friends

ದಾವಣಗೆರೆ: “ಧೈರ್ಯವಿದ್ದರೆ ದಾವಣಗೆರೆಗೆ ಕಾಲಿಡು” ಎಂಬ ಬಿಜೆಪಿ ಮುಖಂಡರ ಸವಾಲನ್ನು ಸ್ವೀಕರಿಸಿ ನಗರಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಭೇಟಿ ಶನಿವಾರ ತೀವ್ರ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಸವಾಲು-ಪ್ರತಿಸವಾಲು:

ಕಳೆದ ಕೆಲವು ದಿನಗಳಿಂದ ಪ್ರದೀಪ್ ಈಶ್ವರ್ ಅವರು ಬಿಜೆಪಿಯ ವಿರುದ್ಧ ನೀಡಿದ್ದ ಹೇಳಿಕೆಗಳು ರಾಜಕೀಯ ವಲಯದಲ್ಲಿ ಕಿಡಿ ಹೊತ್ತಿಸಿದ್ದವು. ಇದಕ್ಕೆ ತಿರುಗೇಟು ನೀಡಿದ್ದ ದಾವಣಗೆರೆಯ ಬಿಜೆಪಿ ಮುಖಂಡರು, ಶಾಸಕರು ನಗರಕ್ಕೆ ಬಂದರೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ಈ ಸವಾಲನ್ನು ಗಂಭೀರವಾಗಿ ಪರಿಗಣಿಸಿದ ಪ್ರದೀಪ್ ಈಶ್ವರ್, ಇಂದು ನೇರವಾಗಿ ಬಿಜೆಪಿ ಕಚೇರಿಯಿದ್ದ ರಸ್ತೆಯಲ್ಲೇ ಸಂಚರಿಸುವ ಮೂಲಕ ಸಡ್ಡು ಹೊಡೆದರು.

ಚಪ್ಪಲಿ-ಪೊರಕೆ ಪ್ರದರ್ಶನ:

ಶಾಸಕರ ಆಗಮನದ ಸುಳಿವು ಸಿಗುತ್ತಿದ್ದಂತೆ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು, ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ಚಪ್ಪಲಿ ಮತ್ತು ಪೊರಕೆಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ತಮ್ಮ ವಾಹನದಿಂದ ಕೆಳಗಿಳಿದು ಎದೆಯುಬ್ಬಿಸಿ ಬಿಜೆಪಿ ಕಾರ್ಯಕರ್ತರತ್ತ ಹೆಜ್ಜೆ ಹಾಕುತ್ತಿದ್ದಂತೆ ಗದ್ದಲ ಮತ್ತಷ್ಟು ಹೆಚ್ಚಾಯಿತು.

ಪೊಲೀಸ್ ಹರಸಾಹಸ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಉಭಯ ಬಣಗಳನ್ನು ಚದುರಿಸಲು ಯತ್ನಿಸಿದರು. “ನಾನು ಕೊಟ್ಟ ಮಾತಿನಂತೆ ದಾವಣಗೆರೆಗೆ ಬಂದಿದ್ದೇನೆ, ತಾಕತ್ತಿದ್ದರೆ ನನ್ನನ್ನು ತಡೆಯಿರಿ” ಎಂದು ಶಾಸಕರು ಕಿಡಿಕಾರಿದರೆ, ಬಿಜೆಪಿ ಕಾರ್ಯಕರ್ತರು ಪ್ರಚೋದನಕಾರಿ ವರ್ತನೆ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರಿಗೆ ಪ್ರದೀಪ್ ಈಶ್ವರ್ ಸವಾಲು

ನಗರದಲ್ಲಿ ನಡೆದ ಹೈಡ್ರಾಮಾ ವೇಳೆ ತಮಗೆ ಕಪ್ಪು ಬಾವುಟ ಹಾಗೂ ಚಪ್ಪಲಿ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಪ್ರದೀಪ್ ಈಶ್ವರ್ ಅಬ್ಬರದ ಮೂಲಕವೇ ಉತ್ತರಿಸಿದರು. ಪೊಲೀಸರ ಸರ್ಪಗಾವಲಿನಲ್ಲಿ ನಿಂತೇ ಕೇಸರಿ ಪಡೆಗೆ ಸೆಡ್ಡು ಹೊಡೆದ ಅವರು “ಪ್ರದೀಪ್ ಈಶ್ವರ್ ದಾವಣಗೆರೆಗೆ ಬಂದರೆ ಹೊಡೆಯುತ್ತೇವೆ, ತುಳಿಯುತ್ತೇವೆ ಎಂದು ಸವಾಲು ಹಾಕಿದ್ದರಲ್ಲಾ? ಈಗ ನಾನು ನಿಮ್ಮ ಮುಂದೆಯೇ ಬಂದಿದ್ದೇನೆ. ಈ ಮಣ್ಣಿನ ಮಗ ನಾನು, ಯಾರಿಗೂ ಹೆದರಿ ಓಡುವವನಲ್ಲ. ತಾಕತ್ತಿದ್ದರೆ ಬಂದು ನನ್ನನ್ನು ತಡೆಯಿರಿ,” ಎಂದು ಅಬ್ಬರಿಸಿದರು.

ಚಪ್ಪಲಿ ತೋರಿಸುವ ಸಂಸ್ಕೃತಿ ನಿಮ್ಮದು:

“ನನಗೆ ಚಪ್ಪಲಿ ಮತ್ತು ಪೊರಕೆಗಳನ್ನು ತೋರಿಸುತ್ತಿದ್ದೀರಿ. ಇದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ಜನರ ಪ್ರೀತಿಯಿಂದ ಗೆದ್ದು ಬಂದವನು. ನಿಮ್ಮ ಇಂತಹ ಬೆದರಿಕೆಗಳಿಗೆ ನಾನು ಕೌಂಟ್ ಮಾಡುವುದಿಲ್ಲ. ಸವಾಲು ಹಾಕಿದವರು ಎಲ್ಲಿ ಹೋದರು? ನಾನು ಇಲ್ಲಿಗೆ ಬಂದು ನಿಂತಿದ್ದೇನೆ,” ಎಂದು ಸವಾಲು ಎಸೆದರು.

ಸತ್ಯ ಹೇಳಿದ್ದಕ್ಕೆ ಇಷ್ಟೊಂದು ಭಯವೇ?:

“ನಾನು ನಿಮ್ಮ ಪಕ್ಷದ ತಪ್ಪುಗಳನ್ನು ಪ್ರಶ್ನಿಸಿದ್ದಕ್ಕೆ ಇಷ್ಟೊಂದು ಉರಿಯುತ್ತಿದೆಯೇ? ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಎಲ್ಲಿಗೆ ಬೇಕಾದರೂ ಹೋಗುವ ಅಧಿಕಾರವಿದೆ. ದಾವಣಗೆರೆ ನಿಮ್ಮಪ್ಪನ ಆಸ್ತಿಯಲ್ಲ. ಇಲ್ಲಿನ ಜನರನ್ನು ಭೇಟಿ ಮಾಡಲು ನನಗೆ ಯಾರ ಅನುಮತಿಯೂ ಬೇಕಿಲ್ಲ,” ಎಂದು ಕಿಡಿಕಾರಿದರು.

ಪೊಲೀಸ್ ಭದ್ರತೆ ಬೇಡ ಎಂದ ಶಾಸಕ:

ಘರ್ಷಣೆ ತಾರಕಕ್ಕೇರಿದಾಗ ಪೊಲೀಸರು ಅವರನ್ನು ವಾಹನದೊಳಗೆ ಕೂರಿಸಲು ಯತ್ನಿಸಿದಾಗ, “ನನಗೆ ಯಾವುದೇ ಪೊಲೀಸ್ ರಕ್ಷಣೆ ಬೇಡ, ನಾನು ಒಬ್ಬನೇ ಹೋಗುತ್ತೇನೆ. ಇವರು ಏನು ಮಾಡುತ್ತಾರೆ ನೋಡೋಣ,” ಎಂದು ಪೊಲೀಸರ ಜೊತೆಯೂ ಕೆಲಕಾಲ ವಾಗ್ವಾದ ನಡೆಸಿದರು.

 


Share this with Friends

Related Post