ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಗಳ ನಿರ್ವಹಣೆ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಸಾಕ್ಷಿಯೊದನ್ನು ಸಾರ್ವಜನಿಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಭದ್ರಾವತಿಯಿಂದ ಶಿವಮೊಗ್ಗ ಮಾರ್ಗದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್ಸೊಂದು ಸಂಪೂರ್ಣವಾಗಿ ಒಂದು ಬದಿಗೆ ವಾಲಿ ಸಾಗುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುರಿದ ಸೊಂಟದಂತೆ ಸಾಗಿದ ವಾಹನ:
ಹೆದ್ದಾರಿಯಲ್ಲಿ ಸಾಗುತ್ತಿದ್ದ ಈ ಬಸ್ಸಿನ ಹಿಂಭಾಗದ ಆಕ್ಸಿಲ್ ಅಥವಾ ಚಾಸಿಸ್ ತೀವ್ರವಾಗಿ ಹಾನಿಗೊಳಗಾದಂತೆ ಕಾಣಿಸುತ್ತಿದ್ದು, ಇಡೀ ವಾಹನವು ಸೊಂಟಕ್ಕೆ ಪೆಟ್ಟು ಬಿದ್ದ ನಾಲ್ಕು ಕಾಲಿನ ಪ್ರಾಣಿಯಂತೆ ಒಂದು ಪಕ್ಕಕ್ಕೆ ವಾಲಿಕೊಂಡು ಓಡುತ್ತಿದೆ. ಹೆದ್ದಾರಿಯಲ್ಲಿ ಇಷ್ಟು ವೇಗವಾಗಿ ಸಾಗುತ್ತಿರುವ ಬಸ್ನ ಸಮತೋಲನ ತಪ್ಪಿ ಯಾವುದೇ ಕ್ಷಣದಲ್ಲಾದರೂ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಯಿ ಎದ್ದು ಕಾಣಿಸುತ್ತಿತ್ತು.
ಸಾರ್ವಜನಿಕರ ಆತಂಕ ಮತ್ತು ದೂರು:
“ಈ ರಸ್ತೆಯೇನೋ ಚತುಷ್ಪಥ ಹೆದ್ದಾರಿಯಾಗಿರುವುದರಿಂದ ಬಸ್ ಹೇಗೋ ಸಾಗಿದೆ. ಆದರೆ, ಗ್ರಾಮೀಣ ಭಾಗದ ಕಿರಿದಾದ ರಸ್ತೆಗಳಲ್ಲಿ ಅಥವಾ ತಿರುವುಗಳಲ್ಲಿ ಈ ಬಸ್ಸು ಚಲಿಸುವಾಗ ಎದುರಿಗೆ ಬರುವ ವಾಹನಗಳಿಗೆ ಹಾಗೂ ಬಸ್ಸಿನಲ್ಲಿರುವ ಪ್ರಯಾಣಿಕರಿಗೆ ಅದೆಷ್ಟು ತೊಂದರೆಯಾಗಿರಬಹುದು? ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಪ್ರಯಾಣಿಕರ ಜೀವದ ಮೇಲೆ ಕಾಳಜಿಯಿಲ್ಲವೇ?” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇಂತಹ ಫಿಟ್ನೆಸ್ ಇಲ್ಲದ ಮತ್ತು ಕೆಟ್ಟು ನಿಲ್ಲುವ ಹಂತದಲ್ಲಿರುವ ಬಸ್ಗಳನ್ನು ರಸ್ತೆಗೆ ಇಳಿಸುವ ಮುನ್ನ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಪ್ರಯಾಣಿಕರು ಸಾರಿಗೆ ಇಲಾಖೆಯನ್ನು ಆಗ್ರಹಿಸಿದ್ದಾರೆ.

