Mon. Jun 22nd, 2026

ಅಡ್ಡ ಮತದಾನಕ್ಕೆ ಹಣದ ಆಮಿಷ ಕಾರಣ, ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ; ಧರ್ಮಸ್ಥಳ ವಿವಾದ ಕೈಬಿಡಲು ಪ್ರಲ್ಹಾದ್ ಜೋಶಿ ಸಲಹೆ

Share this with Friends

ಹುಬ್ಬಳ್ಳಿ: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡ ಮತದಾನದ (Cross Voting) ಪ್ರಕ್ರಿಯೆಯನ್ನು ಪಕ್ಷದ ವರಿಷ್ಠರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕೇವಲ ಹಣ, ಅಧಿಕಾರ ಮತ್ತು ವೈಯಕ್ತಿಕ ಆಮಿಷಗಳಿಗೆ ಬಲಿಯಾಗಿ ಪಕ್ಷದ ಶಿಸ್ತು ಉಲ್ಲಂಘಿಸಿ ದ್ರೋಹ ಬಗೆದವರ ವಿರುದ್ಧ ಕಠಿಣ ಸಾಂಸ್ಥಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸುವ ವಿವಾದದ ಕುರಿತು ಮಾತನಾಡಿದ ಅವರು, ಧರ್ಮಸ್ಥಳವು ಕೋಟ್ಯಂತರ ಭಕ್ತರ ಆರಾಧ್ಯ ದೈವವಿರುವ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ. ಇಂತಹ ರಾಜಕೀಯ ಗೊಂದಲಗಳ ಮಧ್ಯೆ ಧರ್ಮಸ್ಥಳ ಕ್ಷೇತ್ರವನ್ನು ಎಳೆದು ತರುವುದು ಒಳಿತಲ್ಲ. ಈ ವಿಷಯವಾಗಿ ನಾನು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘವಾಗಿ ಮಾತನಾಡಿದ್ದು, ಆಣೆ-ಪ್ರಮಾಣದ ನಿರ್ಧಾರವನ್ನು ತಕ್ಷಣವೇ ಕೈಬಿಡುವಂತೆ ಹಿರಿಯ ನಾಯಕನಾಗಿ ಸಲಹೆ ನೀಡಿದ್ದೇನೆ ಎಂದರು. ಪಕ್ಷದ ನಾಯಕರು ತೀವ್ರ ಬೇಸರ ಮತ್ತು ಆಕ್ರೋಶದಿಂದ ಆ ಮಾತು ಹೇಳಿರಬಹುದು. ಆದರೆ ಇಂದಲ್ಲ ನಾಳೆ ಸತ್ಯ ಹೊರಬರಲಿದ್ದು, ಕಿಡಿಗೇಡಿಗಳಿಗೆ ಸೂಕ್ತ ಪಾಠ ಕಲಿಸಲಾಗುವುದು ಎಂದು ತಿಳಿಸಿದರು.

ವಿಶೇಷ ತನಿಖಾ ಸಮಿತಿ ರಚನೆ: ಅಡ್ಡ ಮತದಾನದ ಒಟ್ಟಾರೆ ವಿದ್ಯಮಾನದ ಆಳವಾದ ತನಿಖೆಗಾಗಿ ಈಗಾಗಲೇ ಹಿರಿಯ ಮುಖಂಡರಾದ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸಿ ಮುಂದಿನ ಕೆಲವೇ ದಿನಗಳಲ್ಲಿ ವರಿಷ್ಠರಿಗೆ ವರದಿ ನೀಡಲಿದೆ. ಪಕ್ಷದ ಬಿ-ಫಾರಂ ಪಡೆದು ಗೆದ್ದು ಬಂದು, ಕೊನೆ ಘಳಿಗೆಯಲ್ಲಿ ದ್ರೋಹ ಮಾಡಿದವರು ಭವಿಷ್ಯದಲ್ಲಿ ತೀವ್ರವಾಗಿ ಪಶ್ಚಾತ್ತಾಪ ಪಡಲಿದ್ದಾರೆ ಎಂದು ಜೋಶಿ ಎಚ್ಚರಿಸಿದರು.

ನಾಯಕತ್ವ ಬದಲಾವಣೆ ವದಂತಿ ನಿರಾಕರಣೆ: ರಾಜ್ಯ ಘಟಕದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಮತ್ತು ತಾವು ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ವದಂತಿಗಳನ್ನು ಸಚಿವರು ಸಂಪೂರ್ಣವಾಗಿ ತಳ್ಳಿಹಾಕಿದರು. ಸದ್ಯಕ್ಕೆ ಅಧ್ಯಕ್ಷರ ಬದಲಾವಣೆ ಕುರಿತು ಕೇಂದ್ರ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ತಾವು ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣದ ಜವಾಬ್ದಾರಿ ಅಥವಾ ರಾಜ್ಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ: ರಾಜ್ಯದಲ್ಲಿ ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದುರಹಂಕಾರದ ಆಡಳಿತ ನಡೆಯುತ್ತಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಪ್ರಸ್ತುತ ಸರ್ಕಾರವು ಸಾರ್ವಜನಿಕರ ಮೂಲಸೌಕರ್ಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

 

 


Share this with Friends

Related Post