ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ (ಫುಟ್ಪಾತ್) ಒತ್ತುವರಿ ತೆರವುಗೊಳಿಸುವ ದೊಡ್ಡ ದೊಡ್ಡ ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮೆಜೆಸ್ಟಿಕ್ ಅಂಡರ್ಪಾಸ್ನ ದುಃಸ್ಥಿತಿ ಮಾತ್ರ ಕಾಣದಿರುವುದು ಸಾರ್ವಜನಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ನಗರದ ಪ್ರಮುಖ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಮೆಜೆಸ್ಟಿಕ್ ಸಬ್ವೇನಲ್ಲಿ ಪಾದಚಾರಿಗಳ ಓಡಾಟಕ್ಕೆ ಜಾಗವಿಲ್ಲದಂತೆ ಅಕ್ರಮ ಅಂಗಡಿಗಳು ತಲೆ ಎತ್ತಿದ್ದು, ಸಾರ್ವಜನಿಕರು ನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಪ್ರಚಾರದ ಕಾರ್ಯಾಚರಣೆಗೆ ಸಾರ್ವಜನಿಕರ ತರಾಟೆ:
ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಲ್ಲಿ ರಾಜಕಾರಣಿಗಳು ಕ್ಯಾಮೆರಾಗಳ ಮುಂದೆ ನಿಂತು ಫುಟ್ಪಾತ್ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಸುದ್ದಿಯಾಗುತ್ತಿದ್ದಾರೆ. ಆದರೆ, ನಗರದ ಹೃದಯಭಾಗದಲ್ಲಿರುವ ಮೆಜೆಸ್ಟಿಕ್ ಸಬ್ವೇ ಒಳಗೆ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಅಕ್ರಮ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದರೂ ಯಾವುದೇ ಒಬ್ಬ ರಾಜಕಾರಣಿ ಅಥವಾ ಹಿರಿಯ ಅಧಿಕಾರಿ ಇತ್ತ ತಿರುಗಿಯೂ ನೋಡುತ್ತಿಲ್ಲ. ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಕಾರ್ಯಾಚರಣೆಯೇ ಎಂದು ನಾಗರಿಕರು ನೇರವಾಗಿ ಪ್ರಶ್ನಿಸುತ್ತಿದ್ದಾರೆ.
ಓಡಾಟಕ್ಕೆ ಅಡ್ಡಿ – ಮಹಿಳೆಯರು, ವೃದ್ಧರ ಪರದಾಟ:
ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಮತ್ತು ಕಚೇರಿಗೆ ಹೋಗುವ ಸಾರ್ವಜನಿಕರು ಸಂಚರಿಸುತ್ತಾರೆ. ಆದರೆ ಪಾದಚಾರಿ ಮಾರ್ಗಗಳ ಇಕ್ಕೆಲಗಳಲ್ಲಿ, ಮೆಟ್ಟಿಲುಗಳ ಇಳಿಯುವ ಜಾಗಗಳಲ್ಲೂ ಸಾಲು ಸಾಲು ಅಂಗಡಿಗಳನ್ನು ಇಟ್ಟಿರುವುದರಿಂದ ಜನದಟ್ಟಣೆಯ ಸಮಯದಲ್ಲಿ ಓಡಾಡಲು ಜಾಗವೇ ಇಲ್ಲದಂತಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತಳ್ಳಾಟದ ನಡುವೆ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳ್ಳತನ ಹಾಗೂ ಕಿಡಿಗೇಡಿಗಳ ಹಾವಳಿಯೂ ಹೆಚ್ಚಾಗುತ್ತಿದ್ದು, ಸುರಕ್ಷತೆಯ ಪ್ರಶ್ನೆ ಎದುರಾಗಿದೆ.
ತಾರತಮ್ಯದ ನೀತಿ ನಿಲ್ಲಲಿ ಎಂದು ಆಗ್ರಹ:
“ಕೆಲವು ಕಡೆ ಸಣ್ಣ ಪುಟ್ಟ ರೆಕ್ಕೆ ಅಂಗಡಿಗಳನ್ನು ತೆರವುಗೊಳಿಸುವ ಬಿಬಿಎಂಪಿ, ಮೆಜೆಸ್ಟಿಕ್ನಲ್ಲಿ ರಾಜಾರೋಷವಾಗಿ ಪಾದಚಾರಿಗಳ ಹಕ್ಕನ್ನು ಕಸಿದುಕೊಳ್ಳುತ್ತಿರುವ ದೊಡ್ಡ ಜಾಲದ ವಿರುದ್ಧ ಯಾಕೆ ಮೌನವಾಗಿದೆ? ರಾಜಕಾರಣಿಗಳಿಗೆ ಇಲ್ಲಿನ ಒತ್ತುವರಿ ಕಣ್ಣಿಗೆ ಕಾಣಿಸುತ್ತಿಲ್ಲವೇ ಅಥವಾ ಮತಬ್ಯಾಂಕ್ ಮತ್ತು ರಾಜಕೀಯ ಹಿತಾಸಕ್ತಿಗಾಗಿ ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಪ್ರಚಾರದ ರಾಜಕಾರಣ ನಿಲ್ಲಿಸಿ, ಮೊದಲು ಮೆಜೆಸ್ಟಿಕ್ ಅಂಡರ್ಪಾಸ್ ಅನ್ನು ಒತ್ತುವರಿ ಮುಕ್ತಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಬೆಂಗಳೂರಿಗರು ಕಟ್ಟುನಿಟ್ಟಿನ ಒತ್ತಾಯ ಹೇರಿದ್ದಾರೆ.

