ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರ ಸ್ಮರಣಾರ್ಥ ಸದಾಶಿವನಗರದ ಸ್ಯಾಂಕಿ ಕೆರೆ ಮುಖ್ಯದ್ವಾರದ ಮುಂಭಾಗವಿರುವ ತ್ರಿಕೋನ ಉದ್ಯಾನದಲ್ಲಿ ನಿರ್ಮಿಸಲಾದ 10 ಅಡಿ ಎತ್ತರದ ಭವ್ಯ ಪುತ್ಥಳಿಯನ್ನು ಇಂದು ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು. ಈ ಪ್ರತಿಮೆಗೆ “ಸ್ಫೂರ್ತಿಯ ಪ್ರತಿಮೆ” (Statue of Inspiration) ಎಂದು ಹೆಸರಿಸಲಾಗಿದ್ದು, ಅಪ್ಪು ಅವರ ನಗುವಿನ ಮುಖದ ಈ ಕಂಚಿನ ಪ್ರತಿಮೆ ಎಲ್ಲರ ಗಮನ ಸೆಳೆಯಿತು.
ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ರಾಜೇಂದ್ರ ಸಿಂಗ್ ಬಾಬು ಅವರು ಜಂಟಿಯಾಗಿ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದರು.
ಗಣ್ಯರ ನಮನ:
ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು, “ಅಪ್ಪು ಅವರ ಮೇಲಿನ ಅಭಿಮಾನಿಗಳ ಪ್ರೀತಿ ಬೆಲೆಕಟ್ಟಲಾಗದ್ದು. ಸದಾಶಿವನಗರದೊಂದಿಗೆ ನಮಗೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಅವರ ಪ್ರತಿಮೆ ಸ್ಥಾಪನೆಯಾಗಿರುವುದು ಅತ್ಯಂತ ಸಂತೋಷದ ವಿಷಯ” ಎಂದು ಭಾವುಕರಾಗಿ ನುಡಿದರು.
ನಿರ್ದೇಶಕ ಡಾ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, “ಪುನೀತ್ ರಾಜ್ಕುಮಾರ್ ಕೇವಲ ನಟರಾಗಿರಲಿಲ್ಲ, ಅವರು ಸಮಾಜಕ್ಕೆ ದೊಡ್ಡ ಮಾದರಿಯಾಗಿದ್ದರು. ಈ ‘ಸ್ಫೂರ್ತಿಯ ಪ್ರತಿಮೆ’ ಮುಂದಿನ ಪೀಳಿಗೆಗೆ ಅವರ ಸದ್ಗುಣಗಳನ್ನು ನೆನಪಿಸುತ್ತದೆ” ಎಂದರು. ಶಾಸಕ ಡಾ. ಸಿ.ಎನ್. ಅಶ್ವತ್ ನಾರಾಯಣ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ, ಅಪ್ಪು ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಸ್ಮರಿಸಿದರು.
ಅಭಿಮಾನಿಗಳ ಸಾಗರ:
ತಮ್ಮ ನೆಚ್ಚಿನ ನಟನ ಪ್ರತಿಮೆಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವಾಗ ‘ಅಪ್ಪು ಅಮರ’ ಎಂಬ ಘೋಷಣೆಗಳು ಮೊಳಗಿದವು. ಕಾರ್ಯಕ್ರಮದಲ್ಲಿ ಕ್ಷೇತ್ರದ ಸ್ಥಳೀಯ ಮುಖಂಡರು, ಚಲನಚಿತ್ರ ರಂಗದ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸ್ಯಾಂಕಿ ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಈ ಪ್ರತಿಮೆಯು ಇನ್ಮುಂದೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ.

