Mon. Jun 15th, 2026

ಹಳೆಯ ಬಸ್ಸನ್ನೇ ಹೈಟೆಕ್ ಬಸ್ ನಿಲ್ದಾಣವಾಗಿ ಬದಲಿಸಿದ ಕರಾವಳಿ ಯುವಕರು: ‘V2 Guys’ ವಾಟ್ಸಾಪ್ ಗ್ರೂಪ್ ಮಾದರಿ ಕಾರ್ಯ!

Share this with Friends

ಮಂಗಳೂರು: ಸಾಮಾನ್ಯವಾಗಿ ಸಂಚಾರ ಯೋಗ್ಯವಲ್ಲದ ಹಳೆಯ ಬಸ್‌ಗಳು ಗುಜರಿ ಸೇರುವುದನ್ನು ಅಥವಾ ರಸ್ತೆ ಬದಿ ಧೂಳು ಹಿಡಿಯುವುದನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕರ ತಂಡವೊಂದು ಹಳೆಯ ಬಸ್ಸನ್ನೇ ಅತ್ಯಂತ ಸುಂದರ ಹಾಗೂ ವಿನೂತನ ಬಸ್ ನಿಲ್ದಾಣವನ್ನಾಗಿ ಮಾರ್ಪಡಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಸಮೀಪದ ಬಂಡಸಾಲೆಯ ಯುವಕರ ವಿಶಿಷ್ಟ ಪ್ರಯತ್ನಕ್ಕೆ ಸದ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ವಾಟ್ಸಾಪ್ ಗ್ರೂಪ್ ಯುವಕರ ಜಂಟಿ ಸಾಹಸ

ಬಂಡಸಾಲೆಯ “ವೀಟು ಗಾಯ್ಸ್” (V2 Guys) ಹೆಸರಿನ ವಾಟ್ಸಾಪ್ ಗ್ರೂಪ್‌ನ ಸುಮಾರು 9 ರಿಂದ 10 ಮಂದಿ ಯುವಕರು ಸೇರಿ ಈ ಅಸಾಧ್ಯವಾದ ಕೆಲಸವನ್ನು ಸಾಧ್ಯವಾಗಿಸಿದ್ದಾರೆ. ಕಸದ ರಾಶಿಗೆ ಸೇರಬೇಕಿದ್ದ ಹಳೆಯ ಬಸ್ ಒಂದನ್ನು ಖರೀದಿಸಿದ ಯುವಕರು, ತಮ್ಮ ಸ್ವಂತ ದುಡಿಮೆಯ ಹಣವನ್ನು ಒಟ್ಟುಗೂಡಿಸಿ, ರಾತ್ರಿ-ಹಗಲು ಎನ್ನದೆ ಶ್ರಮವಹಿಸಿ ಅದನ್ನು ಸುಂದರ ಬಸ್ ನಿಲ್ದಾಣವನ್ನಾಗಿ ಮರುರೂಪಿಸಿದ್ದಾರೆ. ಸದ್ಯ ಈ ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.

ಆಕರ್ಷಕ ತಾಣವಾದ ನಿಲ್ದಾಣ

ಈ ವಿನೂತನ ಬಸ್ ನಿಲ್ದಾಣವು ಸ್ಥಳೀಯ ಪ್ರಯಾಣಿಕರಿಗೆ ಮಳೆ ಹಾಗೂ ಬಿಸಿಲಿನಿಂದ ಆಶ್ರಯ ನೀಡುವುದಷ್ಟೇ ಅಲ್ಲದೆ, ನೋಡಲು ಅತ್ಯಂತ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಈ ಯೋಜನೆಯ ಕುರಿತು ತಂಡದ ಸದಸ್ಯರಾದ ಭರತ್ ಮಾತನಾಡಿ, “ಸಮಾಜಕ್ಕೆ ಏನಾದರೂ ಹೊಸದನ್ನು ಮತ್ತು ಉಪಯುಕ್ತವಾದುದನ್ನು ನೀಡಬೇಕೆಂಬ ಆಶಯದಿಂದ ನಮ್ಮ ತಂಡದ ಎಲ್ಲ ಸ್ನೇಹಿತರು ಒಟ್ಟಾಗಿ ಶ್ರಮಿಸಿದ್ದೇವೆ. ಮುಂಬರುವ ದಿನಗಳಲ್ಲೂ ಇಂತಹ ಸಮಾಜಮುಖಿ ಕೆಲಸಗಳನ್ನು ಮುಂದುವರಿಸುವ ಹಂಬಲ ನಮಗಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೌಹಾರ್ದತೆಯ ಸಂದೇಶ

ಈ ಬಸ್ ನಿಲ್ದಾಣದ ಮತ್ತೊಂದು ವಿಶೇಷತೆಯೆಂದರೆ, ಇದರ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಾಮಾಜಿಕ ಸಾಮರಸ್ಯ, ಏಕತೆ ಹಾಗೂ ಸೌಹಾರ್ದತೆಯನ್ನು ಸಾರುವ ಅರ್ಥಪೂರ್ಣ ಸ್ಟಿಕ್ಕರ್‌ಗಳು ಮತ್ತು ಬರಹಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ತಲುಪಿಸುವ ಯುವಕರ ಈ ಕ್ರಿಯಾಶೀಲ ನಡೆಗೆ ಕರಾವಳಿ ಜನತೆ ಫಿದಾ ಆಗಿದ್ದಾರೆ.

 

 


Share this with Friends

Related Post