Sat. Jun 6th, 2026

 ‘ನಾನು ಯಾರಿಗೆ ದ್ರೋಹ ಮಾಡಿದ್ದೇನೆ? ಆಧಾರ ಸಹಿತ ಮಾತನಾಡಲಿ’: ಬಿಎಸ್‌ವೈಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

Share this with Friends

ಬಾಗಲಕೋಟೆ: “ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎಂಬ ಬಗ್ಗೆ ಯಡಿಯೂರಪ್ಪ ಅವರು ಸ್ಪಷ್ಟಪಡಿಸಲಿ. ವಯಸ್ಸಾದ ಕಾಲದಲ್ಲಿ ಅರಳು-ಮರಳು ಆಗಿರುವ ಅವರು, ಆಧಾರ ರಹಿತವಾಗಿ ಮಾತನಾಡುವುದನ್ನು ಬಿಡಲಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನವನಗರ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಸ್ವತಃ ಬಿಜೆಪಿ ನಾಯಕರಾದ ಯತ್ನಾಳ್ ಮತ್ತು ವಿಶ್ವನಾಥ್ ಅವರೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ ಎಂಬುದನ್ನು ನೆನಪಿಸಿದರು.

ಜಾತಿ ರಾಜಕಾರಣದ ಆರೋಪಕ್ಕೆ ಪ್ರತ್ಯುತ್ತರ:

ಬಾಗಲಕೋಟೆಯಲ್ಲಿ ಸ್ವಜಾತಿಯ ಅಭ್ಯರ್ಥಿ ಇರುವ ಕಾರಣಕ್ಕೆ ಸಿಎಂ ಬೀಡುಬಿಟ್ಟಿದ್ದಾರೆ ಎಂಬ ಬಿಎಸ್‌ವೈ ಟೀಕೆಗೆ ಉತ್ತರಿಸಿದ ಅವರು, “ದಾವಣಗೆರೆ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ನಾನು ಪ್ರಚಾರ ಮಾಡಿದ್ದೇನೆ, ಅವರು ಯಾವ ಜಾತಿ? ನಾವು ವ್ಯಕ್ತಿಯ ಜಾತಿ ನೋಡಿ ಪ್ರಚಾರ ಮಾಡುವುದಿಲ್ಲ, ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ:

ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರ ಅಸಂಸದೀಯ ಪದಬಳಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ” ಎಂದರು. ಅಲ್ಲದೆ, ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ” ಎಂದು ಚುಟುಕಾಗಿ ಉತ್ತರಿಸಿದರು.

 


Share this with Friends

Related Post