ಬೆಂಗಳೂರು:ಕರ್ನಾಟಕ ಸರ್ಕಾರದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಾರ್ಹಗೊಳಿಸಲು ತಾಂತ್ರಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕ ಸೇವೆಗಳ ಪರಿಣಾಮಕಾರಿ ವಿತರಣೆ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರಿ ಇಲಾಖೆಗಳ ಆಧಾರ್ ದೃಢೀಕರಣ ವ್ಯವಸ್ಥೆಯ ತಂತ್ರಾಂಶವನ್ನು ನವೀಕರಿಸಲಾಗುತ್ತಿದೆ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಎನ್ಕ್ರಿಪ್ಷನ್ ಕೀಗಳನ್ನು ಸುರಕ್ಷಿತವಾಗಿ ನಿರ್ವಹಿಸುವ ಹೆಚ್.ಎಸ್.ಎಂ (HSM) ವ್ಯವಸ್ಥೆಯ ಮೂಲಕ ಪ್ರತಿದಿನ ಸುಮಾರು 10 ರಿಂದ 12 ಲಕ್ಷ ಆಧಾರ್ ದೃಢೀಕರಣ ವ್ಯವಹಾರಗಳು ನಡೆಯುತ್ತಿವೆ. ಈ ವ್ಯವಸ್ಥೆಗೆ ಇತ್ತೀಚಿನ ಭದ್ರತಾ ಪ್ಯಾಚ್ಗಳು, ಬಗ್ ಫಿಕ್ಸ್ಗಳು ಹಾಗೂ ಒ.ಇ.ಎಂ (OEM) ಬೆಂಬಲಿತ ತಂತ್ರಾಂಶಗಳನ್ನು ಅಳವಡಿಸಿ ಉನ್ನತೀಕರಿಸಲಾಗುತ್ತಿದೆ.
3 ದಿನಗಳ ಕಾಲ ರಾತ್ರಿ ವೇಳೆ ತಾಂತ್ರಿಕ ಕಾರ್ಯ
ಸಾರ್ವಜನಿಕರಿಗೆ ಮತ್ತು ಕಚೇರಿ ಕೆಲಸಗಳಿಗೆ ಹೆಚ್ಚಿನ ತೊಂದರೆ ಉಂಟಾಗದಂತೆ ತಡೆಯಲು ಕಚೇರಿ ವೇಳೆಯ ನಂತರ ಈ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಜುಲೈ 31, ಆಗಸ್ಟ್ 1 ಮತ್ತು ಆಗಸ್ಟ್ 2ರಂದು ಸಂಜೆ 6.00 ಗಂಟೆಯಿಂದ ಮರುದಿನ ಬೆಳಿಗ್ಗೆ 6.00 ಗಂಟೆಯವರೆಗೆ ಈ ತಾಂತ್ರಿಕ ಪ್ರಕ್ರಿಯೆ ನಡೆಯಲಿದೆ. ಈ ನಿಗದಿತ ಅವಧಿಯಲ್ಲಿ ಆಧಾರ್ ದೃಢೀಕರಣ ಆಧಾರಿತ ಸೇವೆಗಳಲ್ಲಿ ಸಲ್ಪ ಮಟ್ಟಿನ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ನಾಗರಿಕರ ಡಿಜಿಟಲ್ ಮಾಹಿತಿಯ ಸುರಕ್ಷತೆ ಹಾಗೂ ಸೈಬರ್ ಸ್ಥೈರ್ಯವನ್ನು ಇನ್ನಷ್ಟು ಬಲಪಡಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ತಾಂತ್ರಿಕ ಸುಧಾರಣೆಯಿಂದ ಸಾರ್ವಜನಿಕರಿಗೆ ಆಗಬಹುದಾದ ಅನಾನುಕೂಲವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಲಾಗಿದೆ ಎಂದು ಇ-ಆಡಳಿತ ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ.

