ಬೆಂಗಳೂರು: ಪುಲಕೇಶಿನಗರ ವಿಭಾಗದ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ತಿಗಳು, ಶಾಲೆಗಳು ಅಥವಾ ಕಾಂಪೌಂಡ್ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಕಡಕ್ ಎಚ್ಚರಿಕೆ ನೀಡಿದೆ.
ಪಾಲಿಕೆಯ ಉತ್ತರ ವಲಯದ ಪುಲಕೇಶಿನಗರ ವಿಭಾಗದ ವ್ಯಾಪ್ತಿಗೆ ಒಳಪಡುವ ಶ್ಯಾಂಪುರ, ಕಾವಲ್ ಬೈರಸಂದ್ರ, ಶಕ್ತಿನಗರ, ಪೆರಿಯಾರ್ ನಗರ, ಅರುಣಾ ಅಸೀಫ್ ಅಲಿ, ವರಲಕ್ಷ್ಮಿನಗರ, ಚೋಟ್ಟಾನಗರ, ಕುಶಾಲನಗರ, ಸಗಾಯಪುರಂ, ಪುಲಕೇಶಿನಗರ್ ಮತ್ತು ಎಸ್.ಕೆ. ಗಾರ್ಡನ್ ವಾರ್ಡ್ಗಳ ವ್ಯಾಪ್ತಿಯಲ್ಲಿ ಈ ಆದೇಶ ಕಡ್ಡಾಯವಾಗಿ ಅನ್ವಯಿಸಲಿದೆ.
ಸ್ವಯಂ ತೆರವುಗೊಳಿಸಲು ಸೂಚನೆ:
ಅಪಾಯಕಾರಿ ಸ್ಥಿತಿಯಲ್ಲಿರುವ ಖಾಸಗಿ ಶಾಲಾ ಕಟ್ಟಡಗಳು, ಖಾಸಗಿ ಕಟ್ಟಡ ಹಾಗೂ ಕಾಂಪೌಂಡ್ ಗೋಡೆಗಳನ್ನು ಮಾಲೀಕರು ತಕ್ಷಣವೇ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ನಿರ್ಲಕ್ಷ್ಯ ವಹಿಸಿ ಏನಾದರೂ ಅನಾಹುತ ಸಂಭವಿಸಿದರೆ, ಎಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ಇಲಾಖೆಗಳ ಕಾನೂನು ಕ್ರಮಗಳಿಗೆ ಮಾಲೀಕರೇ ನೇರ ಜವಾಬ್ದಾರರಾಗುತ್ತಾರೆ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಸಾರ್ವಜನಿಕರು ಮಾಹಿತಿ ನೀಡಬಹುದು:
ನಿಮ್ಮ ಸುತ್ತಮುತ್ತ ಇಂತಹ ಅಪಾಯಕಾರಿ ಸರ್ಕಾರಿ ಅಥವಾ ಖಾಸಗಿ ಕಟ್ಟಡಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ಅಧಿಕಾರಿಗಳನ್ನು ದೂರವಾಣಿ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ:
ಕಾರ್ಯಪಾಲಕ ಅಭಿಯಂತರರು (ತಿಪ್ಪೇಸ್ವಾಮಿ): 95380 04111
ಸಹಾಯಕ ಕಾರ್ಯಪಾಲಕ ಅಭಿಯಂತರರು (ದೇವರಾಜಯ್ಯ ಕೆ.ಬಿ.): 98861 53161
ಸಹಾಯಕ ಕಾರ್ಯಪಾಲಕ ಅಭಿಯಂತರರು (ಕೃಷ್ಣಪ್ಪ ವಿ.ಆರ್.): 88671 96994
ಸಹಾಯಕ ಕಾರ್ಯಪಾಲಕ ಅಭಿಯಂತರರು (ರಾಘವೇಂದ್ರ): 98457 30883

