Sat. Jun 6th, 2026

ದಾವಣಗೆರೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ: ಎಂಎಲ್‌ಸಿ ಅಬ್ದುಲ್ ಜಬ್ಬಾರ್‌ಗೆ ಸಚಿವ ಮಲ್ಲಿಕಾರ್ಜುನ್ ಕಟು ವಾಗ್ದಾಳಿ

Share this with Friends

ದಾವಣಗೆರೆ: ಜಿಲ್ಲಾ ಕಾಂಗ್ರೆಸ್‌ನಲ್ಲಿನ ಆಂತರಿಕ ಅಸಮಾಧಾನ ಈಗ ಬೀದಿಗೆ ಬಂದಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಚುನಾವಣೆ ಪ್ರಚಾರದ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಜಬ್ಬಾರ್ ಅವರಿಗೆ ಸಚಿವರು, “ಪಕ್ಷದ ಅನ್ನ ತಿಂದ ಮೇಲೆ ಜವಾಬ್ದಾರಿಯಿಂದ ಕೆಲಸ ಮಾಡಬೇಕಿತ್ತು” ಎಂದು ಕಟುವಾದ ಶಬ್ದಗಳಲ್ಲಿ ಟಾಂಗ್ ನೀಡಿದ್ದಾರೆ.

ಘಟನೆಯ ಹಿನ್ನೆಲೆ:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಿಂದಲೇ ಅಸಮಾಧಾನ ಹೊಗೆಯಾಡುತ್ತಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯವಿದ್ದರೂ, ಹೈಕಮಾಂಡ್ ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಮಣೆ ಹಾಕಿತ್ತು. ಇದರಿಂದ ಬೇಸತ್ತಿದ್ದ ಅಬ್ದುಲ್ ಜಬ್ಬಾರ್, “ನನ್ನನ್ನು ಪ್ರಚಾರಕ್ಕೆ ಯಾರೂ ಕರೆದಿಲ್ಲ, ಕನಿಷ್ಠ ಸೌಜನ್ಯಕ್ಕೂ ಸಂಪರ್ಕಿಸಿಲ್ಲ” ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಸಚಿವರ ಆಕ್ರೋಶ:

ಜಬ್ಬಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಮಲ್ಲಿಕಾರ್ಜುನ್, “ಪಕ್ಷ ನಮಗೆ ಎಲ್ಲವನ್ನೂ ನೀಡಿದೆ. ಅಧಿಕಾರ ಅನುಭವಿಸಿ, ಪಕ್ಷದ ಅನ್ನ ತಿಂದ ಮೇಲೆ ಚುನಾವಣೆ ಸಮಯದಲ್ಲಿ ನೆಪ ಹೇಳದೆ ಕೆಲಸ ಮಾಡುವುದು ಪ್ರತಿಯೊಬ್ಬ ಕಾರ್ಯಕರ್ತನ ಧರ್ಮ. ಪ್ರತ್ಯೇಕ ಆಹ್ವಾನದ ಅಗತ್ಯವಿರಲಿಲ್ಲ” ಎಂದು ಕಿಡಿಕಾರಿದ್ದಾರೆ.

 


Share this with Friends

Related Post