Wed. Jul 15th, 2026

ಕರಾವಳಿಯ ಕಂಬಳದ ಅಬ್ಬರಕ್ಕೆ ದಿನಾಂಕ ಫಿಕ್ಸ್: ಜುಲೈ 24 ಕ್ಕೆ ತೆರೆಗೆ ಬರಲಿದೆ ರಾಜ್ ಬಿ ಶೆಟ್ಟಿ-ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾ!

Share this with Friends

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರಗಳ ಮೂಲಕ ಗಮನ ಸೆಳೆಯುತ್ತಿರುವ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕಂಬಳ’ ಚಲನಚಿತ್ರದ ಹೊಸ ಕವರ್ ವಿಡಿಯೋ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕರಾವಳಿ ಸಂಸ್ಕೃತಿಯ ಹೆಮ್ಮೆಯ ಕ್ರೀಡೆಯಾದ ಕಂಬಳದ ವೇಗ, ಆಕ್ರೋಶ ಹಾಗೂ ಬಂಡಾಯದ ಕಥೆಯನ್ನು ಒಳಗೊಂಡಿರುವ ಈ ಚಿತ್ರವು ಜುಲೈ 24 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.

ಕಂಬಳದ ಗತ್ತನ್ನು ಪರಿಚಯಿಸುವ ವಿಡಿಯೋ ಔಟ್

ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ವಿಡಿಯೋ ಝಲಕ್ ಕಣ್ಣಿಗೆ ಹಬ್ಬದಂತಿದ್ದು, ಕಂಬಳದ ಅಸಲಿ ಕಳೆ ಹಾಗೂ ರೇಸ್‌ನ ಭೀಕರತೆಯನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ‘ಬನ್ನಿ ಕರಾವಳಿಗೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಕರಾವಳಿಯ ಮಣ್ಣಿನ ಸೊಗಡನ್ನು ಇಡೀ ದೇಶಕ್ಕೆ ಪರಿಚಯಿಸಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರವನ್ನು ಗುರುದತ್ತ ಗಣಿಗ ನಿರ್ದೇಶಿಸಿದ್ದು, ಗುರುದತ್ತ ಗಣಿಗ ಫಿಲ್ಮ್ಸ್ ಹಾಗೂ ವಿಕೆ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿವೆ.

ಬಲಿಷ್ಠ ತಾರಾಗಣ, ಬಿಗಿ ತಾಂತ್ರಿಕತೆ

ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಪ್ರಜ್ವಲ್ ದೇವರಾಜ್ ಅವರೊಂದಿಗೆ ಸಂಪದ, ಸುಸ್ಮಿತಾ ಭಟ್, ಶಿಣು ಮಿತ್ರ ಹಾಗೂ ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಅವರು ಹಿನ್ನೆಲೆ ಸಂಗೀತ ಹಾಗೂ ಹಾಡುಗಳನ್ನು ಸಂಯೋಜಿಸಿದ್ದು, ಪ್ರತಿ ದೃಶ್ಯಕ್ಕೂ ಮತ್ತಷ್ಟು ರೋಮಾಂಚನ ನೀಡಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನ (ಎಡಿಟಿಂಗ್) ಚಿತ್ರದ ತಾಂತ್ರಿಕ ಜೀವಾಳವಾಗಿದೆ. ಆನಂದ್ ಆಡಿಯೋ ಮೂಲಕ ಚಿತ್ರದ ಹಾಡುಗಳು ಸಾರ್ವಜನಿಕರ ಮನ ಗೆಲ್ಲುತ್ತಿವೆ.

ಕರಾವಳಿಯ ಕೋಣಗಳ ಓಟ, ಮಣ್ಣಿನ ವಾಸನೆ ಮತ್ತು ಕೌಟುಂಬಿಕ ಸವಾಲುಗಳ ಸುತ್ತ ಸಾಗುವ ಈ ಸಿನಿಮಾ, ಈ ವರ್ಷದ ಸ್ಯಾಂಡಲ್‌ವುಡ್‌ನ ಅತ್ಯಂತ ಭರವಸೆಯ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

 


Share this with Friends

Related Post