Sun. Jul 26th, 2026

ಕಾರ್ಗಿಲ್ ವಿಜಯ ದಿವಸ: ವೀರ ಯೋಧರ ಸ್ಮರಿಸಿದ ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: “ದೇಶದ ವೀರ ಸೈನಿಕರ ಅಪ್ರತಿಮ ತ್ಯಾಗ ಹಾಗೂ ಬಲಿದಾನವೇ ನಮ್ಮ ಸ್ವಾತಂತ್ರ್ಯ ಮತ್ತು ಹೆಮ್ಮೆಯ ಸಂಕೇತ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.

ಬೆಂಗಳೂರಿನ ನೆಹರೂ ತಾರಾಲಯದ ಆವರಣದಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಅವರು ವೀರ ಯೋಧರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ವೀರ ಯೋಧರ ಪರಂಪರೆ ಶಾಶ್ವತ

“ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಸೇನಾ ಪಡೆಗಳು ಹಿಮಾಲಯದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಶತ್ರುಗಳನ್ನು ಸದೆಬಡಿದು ದೇಶದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದವು. ಈ ಕಾರ್ಯಾಚರಣೆಯಲ್ಲಿ ದೇಶದ ರಕ್ಷಣೆಗಾಗಿ 527 ಯೋಧರು ವೀರಮರಣ ಅಪ್ಪಿದ್ದಾರೆ. ಅವರಲ್ಲಿ ಕರ್ನಾಟಕದ 13 ವೀರ ಪುತ್ರರು ಸೇರಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನಮ್ಮ ರಿಯಲ್ ಹೀರೊಗಳ ಪರಂಪರೆ ಎಂದಿಗೂ ಅಮರ” ಎಂದು ಸಿಎಂ ಸ್ಮರಿಸಿದರು.

ಕಾಂಗ್ರೆಸ್ ಪಕ್ಷದ ಇತಿಹಾಸವು ದೇಶದ ಇತಿಹಾಸದೊಂದಿಗೆ ಬೆಸೆದುಕೊಂಡಿದೆ ಎಂದ ಅವರು, ಗಡಿ ರಕ್ಷಣೆಯಲ್ಲಿ ಭಾರತೀಯ ಸೇನೆಯು ಚೀನಾ, ಪಾಕಿಸ್ತಾನ ಸೇರಿದಂತೆ ಯಾವುದೇ ಬಾಹ್ಯ ಅತಿಕ್ರಮಣ ಎದುರಿಸಲು ನಿರಂತರವಾಗಿ ಕಾವಲು ಕಾಯುತ್ತಿದೆ ಎಂದು ಬಣ್ಣಿಸಿದರು.

ರಕ್ಷಣಾ ವಲಯಕ್ಕೆ ಕರ್ನಾಟಕದ ಕೊಡುಗೆ ಅಪಾರ

ಭಾರತದ ರಕ್ಷಣಾ ವಲಯಕ್ಕೆ ಕರ್ನಾಟಕವು ಬೆನ್ನೆಲುಬಾಗಿ ನಿಂತಿದೆ ಎಂದು ಪ್ರತಿಪಾದಿಸಿದ ಡಿ.ಕೆ. ಶಿವಕುಮಾರ್, “ನಮ್ಮ ಯೋಧರು ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವುದರಿಂದ ನಾವು ನಿರಾಳವಾಗಿರಲು ಸಾಧ್ಯವಾಗಿದೆ. ದೇಶದ ಪ್ರಥಮ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದರೊಂದಿಗೆ ಬೆಮೆಲ್, ಡಿಆರ್‌ಡಿಒ ಹಾಗೂ ಇಸ್ರೋದಂತಹ ಪ್ರತಿಷ್ಠಿತ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವುದು ಹೆಮ್ಮೆಯ ವಿಷಯ” ಎಂದರು.

ಐದು ಶಕ್ತಿಗಳು ಒಟ್ಟಾದರೆ ಬಲಿಷ್ಠ ಭಾರತ

“ಯೋಧರು, ಯುವಜನರು, ಮಹಿಳೆಯರು, ರೈತರು ಹಾಗೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ನಾಗರಿಕರು ನಮ್ಮ ಹಸ್ತದ ಐದು ಬೆರಳುಗಳಿದ್ದಂತೆ. ಇವೆಲ್ಲವೂ ಒಟ್ಟಾದಾಗ ದೇಶವು ಬಲಿಷ್ಠ ಮುಷ್ಠಿಯಾಗಿ ರೂಪಗೊಳ್ಳುತ್ತದೆ. ದೇಶದ ಒಳಗಿನ ಮತ್ತು ಹೊರಗಿನ ಯಾವುದೇ ದುಷ್ಟ ಶಕ್ತಿಗಳು ಭಾರತ ಮಾತೆಗೆ ಧಕ್ಕೆ ತರದಂತೆ ಯುವ ಪೀಳಿಗೆ ಜಾಗೃತವಾಗಿರಬೇಕು” ಎಂದು ಕರೆ ನೀಡಿದರು.

ರಾಜ್ಯದಲ್ಲಿ ನೆಲೆಸಿರುವ ಲಕ್ಷಾಂತರ ಯೋಧರ ಹಾಗೂ ಮಾಜಿ ಸೈನಿಕರ ಕುಟುಂಬಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಸೈನಿಕರ ಕಲ್ಯಾಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಲಹೆಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಭರವಸೆ ನೀಡಿದರು

 


Share this with Friends

Related Post