Mon. Jun 29th, 2026

ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಬಿಡುಗಡೆ: ಕಾಂಗ್ರೆಸ್ ವಿರುದ್ಧ ಆರ್‌ ಅಶೋಕ್ ಗಂಭೀರ ಆರೋಪ

Share this with Friends

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ ಬರದ ಭೀತಿ ಎದುರಾಗಿದ್ದರೂ, ರಾಜ್ಯ ಸರ್ಕಾರವು ಕನ್ನಡಿಗರ ಹಿತಾಸಕ್ತಿಯನ್ನು ಬಲಿಗೊಟ್ಟು ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರನ್ನು ಹರಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಿಗರಿಗೆ ಮಹಾದ್ರೋಹ:

ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಹ ಭೀಕರ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಕಾವೇರಿ ಕೊಳ್ಳದ ಜೀವನಾಡಿಯಾಗಿರುವ ಕೆಆರ್‌ಎಸ್ (KRS) ಜಲಾಶಯದಿಂದ ಕುಡಿಯುವ ನೀರಿನ ನೆಪವೊಡ್ಡಿ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಪ್ರತಿದಿನ ಸುಮಾರು 2,000 ಕ್ಯೂಸೆಕ್ ನೀರನ್ನು ನೆರೆಯ ರಾಜ್ಯಕ್ಕೆ ಹರಿಸುತ್ತಿರುವುದು ಕನ್ನಡಿಗರ ಬೆನ್ನಿಗೆ ಚುಚ್ಚಿದ ಚೂರಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಅಧಿಕಾರದ ಆಸೆಗಾಗಿ ಶರಣಾಗತಿ:

ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಬೀದಿನಾಟಕ ಆಡುವ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ತಕ್ಷಣ ತಮಿಳುನಾಡಿನ ಎದುರು ಸಂಪೂರ್ಣವಾಗಿ ಶರಣಾಗುತ್ತದೆ. ಕೇವಲ ಹೈಕಮಾಂಡ್ ಸೂಚನೆ ಮತ್ತು ರಾಜಕೀಯ ಮೈತ್ರಿಯ ಲಾಭಕ್ಕಾಗಿ ಈ ಹಿಂದೆ ಡಿಎಂಕೆ (DMK) ಹಾಗೂ ಪ್ರಸ್ತುತ ಟಿವಿಕೆ (TVK) ಪಕ್ಷಗಳ ಜೊತೆ ರಾಜಿ ಮಾಡಿಕೊಂಡು ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯ ಎಸಗಲಾಗುತ್ತಿದೆ ಎಂದು ಅಶೋಕ್ ದೂರಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್‌ಗೆ ಪ್ರಶ್ನೆಗಳ ಸುರಿಮಳೆ:

ಚುನಾವಣೆಗೂ ಮುನ್ನ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆಯ ನಾಟಕವಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ಯಾವ ಯಾತ್ರೆ ಮಾಡುತ್ತಾರೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ನೀರಿಲ್ಲದೆ ಬೆಳೆ ಒಣಗಿ ಕಾವೇರಿ ಕೊಳ್ಳದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡುತ್ತೀರಾ? ಅಥವಾ ಬೆಂಗಳೂರಿನ ಜನತೆ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಲುಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ? ಎಂದು ಅವರು ತೀಕ್ಷ್ಣವಾಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಜನತೆಗೆ ನೀರಿನ ಭದ್ರತೆ ನೀಡಲು ವಿಫಲವಾಗಿರುವ ಈ ಸರ್ಕಾರಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಎಚ್ಚರಿಸಿದ್ದಾರೆ.

 

 


Share this with Friends

Related Post