Mon. Aug 3rd, 2026

ಇದು ಸಚಿವ ಸಂಪುಟವಲ್ಲ, ಭ್ರಷ್ಟಾಚಾರಕ್ಕೆ ಸಿಕ್ಕ ಬಹುಮಾನ; ಹೊಸ ಸಚಿವರ ಹಿನ್ನೆಲೆ ಕೆದಕಿ ಬಿಜೆಪಿ ಗಂಭೀರ ಆರೋಪ

Share this with Friends

ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸಂಭ್ರಮದ ನಡುವೆಯೇ, ನೂತನವಾಗಿ ಸಚಿವ ಸ್ಥಾನ ಪಡೆದಿರುವ ನಾಯಕರ ವಿರುದ್ಧ ವಿರೋಧ ಪಕ್ಷವಾದ ಬಿಜೆಪಿ ಗಂಭೀರ ಆರೋಪಗಳ ಸುರಿಮಳೆಗೈದಿದೆ. ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿರುವ ಬಿಜೆಪಿ, ನೂತನ ಸಚಿವರಲ್ಲಿ ಹಲವರು ಕಾನೂನು ಹೋರಾಟ ಮತ್ತು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಪಟ್ಟಿ ಬಿಡುಗಡೆ ಮಾಡಿದೆ.

ಐದು ಸಚಿವರ ವಿರುದ್ಧ ನೇರ ಆರೋಪ:

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಐದು ಸಚಿವರ ಹೆಸರುಗಳನ್ನು ಉಲ್ಲೇಖಿಸಿ ಕಠಿಣ ಪದಗಳಿಂದ ಟೀಕಿಸಲಾಗಿದೆ:

ಬಿ. ನಾಗೇಂದ್ರ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಹಗರಣದ ತನಿಖಾ ಸಂಸ್ಥೆಯ ತನಿಖೆಯಲ್ಲಿದ್ದಾರೆ ಎಂದು ಬಿಜೆಪಿ ದೂರಿದೆ.

ಮಧು ಬಂಗಾರಪ್ಪ: ಇವರ ವಿರುದ್ಧದ ಹಣಕಾಸು ವ್ಯವಹಾರ ಹಾಗೂ ಚೆಕ್ ಬೌನ್ಸ್ ಪ್ರಕರಣಗಳ ತೀರ್ಪನ್ನು ಉಲ್ಲೇಖಿಸಿ ಟೀಕೆ ಮಾಡಲಾಗಿದೆ.

ವಿಜಯಾನಂದ ಕಾಶಪ್ಪನವರ್: ಪತ್ರಕರ್ತರಿಗೆ ಬೆದರಿಕೆ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಇವರ ವಿರುದ್ಧ ಗೂಂಡಾಗಿರಿಯ ಆರೋಪ ಹೊರಿಸಲಾಗಿದೆ.

ಸಂತೋಷ್ ಲಾಡ್: ಕಾರ್ಮಿಕರ ಕಲ್ಯಾಣ ನಿಧಿಯ ಅಡಿಯಲ್ಲಿ ನಡೆದಿದೆ ಎನ್ನಲಾದ ಕಿಟ್ ವಿತರಣೆಯ ಅಕ್ರಮದ ಕುರಿತು ನ್ಯಾಯಾಲಯದ ಛೀಮಾರಿಯನ್ನು ನೆನಪಿಸಲಾಗಿದೆ.

ಕೆ.ಎಂ. ಶಿವಲಿಂಗೇಗೌಡ: ಸದನದಲ್ಲಿ ಅಸಂಸದೀಯ ಭಾಷೆ ಬಳಕೆ ಮಾಡುವ ಮೂಲಕ ಶಾಸಕಾಂಗದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

‘ಕೊತ್ವಾಲ್ ಮಾಡೆಲ್’ ಆಡಳಿತ ಎಂದು ಲೇವಡಿ:

ಈ ಸಚಿವ ಸಂಪುಟವು ಅರ್ಹತೆ ಮತ್ತು ನೈತಿಕತೆಗೆ ಬೆಲೆ ನೀಡಿಲ್ಲ. ಕೇವಲ ಅಹಂಕಾರ ಮತ್ತು ಅವ್ಯವಸ್ಥೆಗೆ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಬಹುಮಾನವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ಪ್ರಸ್ತುತ ಸರ್ಕಾರದ ಆಡಳಿತದ ಶೈಲಿಯನ್ನು ತೀಕ್ಷ್ಣವಾಗಿ ಖಂಡಿಸಿರುವ ವಿರೋಧ ಪಕ್ಷ, ಜನಾದೇಶವನ್ನು ಗಾಳಿಗೆ ತೂರಿ ಅನರ್ಹರಿಗೆ ಪಟ್ಟ ಕಟ್ಟಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.

 

 


Share this with Friends

Related Post